Tuesday, December 25, 2012

ಅವಳ ಹೆಣ ಸುಟ್ರಂತೆ

ದೀಪಾವಳಿಯ ಅಮಾವಾಸ್ಯೆಯ ದಿನ ಲಕ್ಷ್ಮೀ ಪೂಜೆ ಮಾಡಿ,ಬಂದ ಹೆಣ್ಣುಮಕ್ಕಳಿಗೆ ಕುಂಕುಮ ನೀಡಿ ಎಲ್ಲರಿಗೂ ಸಿಹಿ ಹಂಚಿ, ಬಾಗಿಲಿಗೆ ದೀಪ ಹಚ್ಚಿಟ್ಟಿದ ನಂತರ,ಅಂದು ಬೆಳಗ್ಗೆ ಮನೆ ಮುಂದೆ ಸಗಣಿ ಸಾರಿಸಿ ಬಿಟ್ಟಿದ್ದ ರಂಗೋಲಿಯನ್ನು ಕಣ್ತುಂಬಿ ಕೊಳ್ಳುತ್ತಾ ರಂಗೋಲಿಯ ಮೇಲೂ ಮೂರ್ನಾಲ್ಕು ದೀಪಗಳನ್ನು ಹಚ್ಚಿಟ್ಟಳು ಸರೋಜಮ್ಮ .ವ್ಯಾಪಾರಿಯೂ ಆದ ತನ್ನ ಗಂಡ ಪ್ರತಿ ವರ್ಷ ಒಳ್ಳೆ ದುಡಿಮೆಯನ್ನೇ ಮಾಡುತ್ತಿದ್ದ.ಪ್ರತಿಷ್ಠೆಗಾಗಿ ಗರಿ ಗರಿ ನೋಟುಗಳನ್ನೇ ಪೂಜೆಗೆ ಇಡುತ್ತಿದ್ದ.ಸಾವಿರಾರು ರೂಪಾಯಿಗಳ ಪಟಾಕಿಗಳನ್ನು ಮಕ್ಕಳು ಸುಡುತ್ತಿದ್ದರು .ಪಟಾಕಿಯ ವಿಷಯದಲ್ಲೂ ಪ್ರತಿಷ್ಠೆ  ಮೆರೆಯುತ್ತಿದ್ದ.ಆದರೆ ಈ ವರ್ಷ ಸರಿಯಾಗಿ ಮಳೆ ಆಗದೆ ಇದ್ದಿದ್ದರಿಂದ,ರೈತರಿಗೆ ಬೆಳೆಯೂ ಸರಿಯಾಗಿ ಆಗಲಿಲ್ಲ.ಈ ವರ್ಷ ರಾಮೇಗೌಡನ ವ್ಯಾಪಾರವೂ ಸ್ವಲ್ಪ ಮಟ್ಟಿಗೆ ಮಂಕಾಯಿತು.ಅವನ ಮಕ್ಕಳಿಗೆ ಹಚ್ಚು ಪಟಾಕಿ ಸಿಡಿಸಲಿಲ್ಲ ಎಂಬ ಅಸಮಧಾನ ತಳ ಊರಿತು.

ಈ ವರ್ಷ ನೆಟ್ಟಗೆ ಮಳೆ ಇಲ್ಲ ,ಬೆಲೆ ಇಲ್ಲ,ಆಗಾಗಿ ವ್ಯಾಪರನೂ ಅಷ್ಟಾಗಿ ಆಗಲಿಲ್ಲ,ಅದಕ್ಕೆ ಈ ವರ್ಷ ಅಷ್ಟು ಜೋರಾಗಿ ಪೂಜೆ ಮಾಡಲಿಲ್ಲ ಎಂದು ಬಂದವರಿಗೆಲ್ಲ ಗಂಡ ಹೆಂಡತಿ ಇಬ್ಬರೂ ಸಬೂಬು ಕೊಟ್ಟಿದ್ದಾಯಿತು.ಊರಿಗೆ ಊರೇ ಮಳೆರಾಯನಲ್ಲಿ ಮೊರೆಯಿಡುತ್ತಿತ್ತು.ಮಳೆಗಾಗಿ ಪೂಜೆ,ಹವನಗಳು,ಪರೇವುಗಳು ನಡೆದವು.ಆದರೂ ಮಳೆರಾಯ ಕೃಪೆ ತೋರಲಿಲ್ಲ.
 ------------------------------

ಸ್ವಲ್ಪ ಹೊತ್ತಿನ ನಂತರ ಅಲ್ಲಿಗೆ ರಾಮೇಗೌಡನ ಹಮಾಲಿ ವೆಂಕಟ ಬಂದ .ಬಂದವನು ಮತ್ತೇರಿಸಿಕೊಂಡೆ ಬಂದಿದ್ದನು. ತೂರಾಡುತ್ತಿದ್ದ ವೆಂಕಟನನ್ನು ದುರುಗುಟ್ಟಿಕೊಂಡು ನೋಡಿದ ಗೌಡ" ಥೂ ಹಲ್ಕಾ ನನ್ ಮಗನೆ.ಹಬ್ಬದ ದಿನನಾದ್ರು ನೆಟ್ಟಗೆ ಇರಕ್ಕೆ ಆಗಲ್ವೆನ್ಲಾ ನಿಂಗೆ,ಕೊಟ್ಟಿದ್ದ ದುಡ್ಡೆಲ್ಲ ಬರಿ ಕುಡಿಯೋಕ್ಕೆ ಆಯ್ತೇನೋ " ಎಂದು ಬೈಯ್ಯುತ್ತಿದ್ದಾಗ ಉರಿಯೋ ಬೆಂಕಿಗೆ ತುಪ್ಪ ಅನ್ನೋ ಹಾಗೆ ಹಾಗೆ,ಸರೋಜಮ್ಮ ಕೂಡ "ಮಕ್ಕಳಿಗೆ ಏನಾದ್ರೂ ಕೊಡ್ಸಿದ್ಯೋ ಇಲ್ವೋ ?" ಎನ್ನುತ್ತಾ "ಇನ್ ಮುಂದೆ ಈ ಹೆಂಡ ಗುಡುಕನಿಗೆ ದುಡ್ಡು ಕೊಡ ಬ್ಯಾಡಿ,ಇವನ ಕೂಲಿ ದುಡ್ಡನ್ನೆಲ್ಲ ಇವನ ಹೆಂಡತಿ ಕೈಲಿ ಕೊಡಿ" ಎಂದು ಗಂಡನಿಗೆ ತಾಕಿತು ಮಾಡಿದಳು.


"ಅಯ್ಯೋ ನಾನು ಕುಡಿದಿರೋದು ಬಿಟ್ಟಾಕಿ,ಈ ವರ್ಷ ನೋಡಿ ಮಳೆ ಇಲ್ದೆ ನಿಮ್ಮ ವ್ಯಾಪಾರ ಇಲ್ಲ.ಲಕ್ಷ್ಮಿ ಪೂಜೆ ಹೀಗೆ ಮಾಡಬೇಕಾಯಿತು" ಎಂದು ಬೇರೆ ಕಡೆ ಮಾತು ಎಳೆಯಲು ನೋಡಿದ.


"ಹೋಗ್ಲಿ ಬಿಡ್ಲಾ ಈ ವರ್ಷ ಹಿಂಗಾಯಿತು.ಮುಂದಿನ ವರ್ಷ ಮಳೆ ಚೆನ್ನಾಗಿ ಆಗುತ್ತೆ" ಅಂದ ಗೌಡ.


"ಥೋ ಗೌಡ್ರೆ,ಮುಂದಿನ ವರ್ಷ ಯಾಕೆ,ನಾಳೆನೆ ಮಳೆ ಬರುತ್ತೆ ನೋಡಿ" ಎಂದು ಅಭಯ ಸೂಚಿಸಿದ.


"ಮುಚ್ಕಂಡು ಹೋಗ್ಲ,ಅದೇನೋ ಹಬ್ಬದ ಊಟ ಇಸ್ಕಂಡು ಉಂಡು,ಮಲ್ಕೋ ಹೋಗು.ಕುಡಿದಿರೋದು ಇಳಿದ ಮೇಲೇ ಬೆಳಗ್ಗೆ ಬಾ" ಎಂದು ಗದರಿದ..


"ಇಲ್ಲ ಗೌಡ್ರೆ,ಈ ವರ್ಷ ಮಳೆ ಬರದೆ ಇರೋದಕ್ಕೆ ನಿಮ್ಮ ಜಾತಿಯವರೇ ಕಾರಣ.ಆ ಹುಚ್ಚಿ ಇದ್ಲಲ್ಲ ಆ ತೀರ್ಥಿ ಅವಳೇ ಕಾರಣ"ಅಂದ..

--------------------------------------
ತೀರ್ಥಿ,ಚಿಕ್ಕ ವಯಸ್ಸಿಗೆ ಮದುವೆ ಮಾಡಿಸಿದ್ದರಿಂದ ಸಂಸಾರ ಮಾಡಲು ಒಲ್ಲೆ ಎಂದು ಕೆಲವೆ ದಿನಗಳಲ್ಲಿ ತವರಿಗೆ ಬಂದಿದ್ದಳು.ಊರಿನ ಜನ ಗಂಡ ಬಿಟ್ಟವಳು ಎಂದು ಚೇಡಿಸುತ್ತಿದ್ದರು.ಗಂಡನ ಮನೆಯಿಂದ ಬರುವಷ್ಟರಲ್ಲಿ ಗರ್ಭಿಣಿ ಆಗಿದ್ದ ತೀರ್ಥಿ ಕೆಲವು ದಿನಗಳಲ್ಲಿ ಒಂದು ಹೆಣ್ಣು ಮಗುವನ್ನು ಹಡೆದಳು .ಅಷ್ಟರಲ್ಲೇ ಎಲ್ಲರ ಹಿರಿತದ ಮಾತುಗಳನ್ನು ಕೇಳಿ ಕೇಳಿ ಅವಳ ಮನಸ್ಥಿತಿ ಹದಗೆಟ್ಟಿತ್ತು.ತನ್ನ ಮಗುವಿಗೆ ಎದೆ ಹಾಲು ಉಣಿಸುವಷ್ಟು ಪ್ರಮೇಯವೂ ಅವಳಲ್ಲಿ ಇರಲಿಲ್ಲ..ಎಲ್ಲರೂ ತಲೆ ಕೆಟ್ಟವಳು ಎಂದು ಕರೆಯುತ್ತಿದ್ದರು.ಕೊನೆಗೊಂದು ದಿನ ಅವಳು ಹುಚ್ಚಿಯೇ ಆಗಿಬಿಟ್ಟಳು.

ಅವಳ ಗಂಡ ಬಂದು ತನ್ನ ಮಗುವನ್ನು ಕರೆದು ಕೊಂಡು ಹೋದ.ಇವಳನ್ನು ಯಾವ ಆಸ್ಪತ್ರೆಗೆ ತೋರಿಸಿದರೂ ಕಾಯಿಲೆ ವಾಸಿ ಆಗಲಿಲ್ಲ.ಕೊನೆಗೆ ತವರು ಮನೆಯವರು ಕೂಡ ಮನೆಯಿಂದ ಹೊರದಬ್ಬಿದರು.ನಂತರ ವರ್ಷಾನು ಗಟ್ಟಲೆ ಬೀದಿ ಬೀದಿ ಅಲೆಯುತ್ತ,ಊರೂರು ಅಲೆಯುತ್ತ ಯಾರ್ಯಾರೋ ಮನೆಯಲ್ಲಿ ಉಳಿದಿದ್ದು ಅಳಸಿದ್ದನೆಲ್ಲ ಕೊಟ್ಟರೆ ಅದನ್ನೇ ಇಸಿದು ಕೊಂಡು ತಿಂದು ಬದುಕುತ್ತಿದ್ದಳು. ಅವಳನ್ನು ಕಂಡು ದಯೆ ತೋರಿದವರು ಒಂದಷ್ಟು ಜನ.ಅಯ್ಯೋ ಪಾಪ ಎಂದು ಮರುಗಿದವರು ಇನ್ನಷ್ಟು ಜನ.ತಿಂಗಳು ಗಟ್ಟಲೆ ಉಟ್ಟ ಸೀರೆಯಲ್ಲೇ ಇದ್ದು ,ರವಿಕೆ ಎಲ್ಲ ಹರಿದು ಹೊಗಿ,ಸ್ತನಗಳೆಲ್ಲ ಕಾಣಿಸುತ್ತಿದ್ದರೂ ಅದರ ಪ್ರಮೇಯವೇ ಇಲ್ಲದೆ ಅವಳು ಓಡಾಡುತ್ತಿದ್ದಾಗ ಬಟ್ಟೆ ಉಡಿಸಿದ ಹೆಂಗಸರು ಒಂದಷ್ಟು ಜನ.ಕೆಲವೊಮ್ಮೆ ಸೆರಗು ಕೆಳಗಿಳಿದು ಹೇಗೆ ಬೇಕಾಗಿ ಹಾಗೆ ಇದ್ದಾಗ,ಛೇಡಿಸಿದ ಮನಸುಗಳು ಕೆಲವು ,ಕಾಮಾಂಧತೆ ಇಂದ ನೋಡಿದ ಕಣ್ಣುಗಳು ಹಲವು.ಹೀಗಿದ್ದ ತೀರ್ಥಿ ಒಂದು ದಿನ ಸತ್ತಳು.

"ಪಾಪ,ಆ ಹುಚ್ಚಿ ಏನ್ ಮಾಡಿದ್ಲು ನಿಮಗೆ ?ಏನೋ ಸತ್ತಳು,ಅವಳು ಬದುಕಿದ್ದರು ಏನ್ ಪ್ರಯೋಜನ ಇತ್ತು ಬಿಡಿ,ಪಾಪ ಅವಳ ಮಗಳು ಬೇರೆ ದೊಡ್ದವಳಾಗುತಿದ್ದಾಳೆ. ಇಂಥವಳು ತನ್ನ ತಾಯಿ ಅಂತ ಅವಳಿಗೆ ಗೊತ್ತಾಗದೆ ಇರೋದೇ ಒಳ್ಳೇದು.ಪಾಪ ಅವಳ ಗಂಡ ಹೇಗೋ ಸಾಕ್ತಿದ್ದಾನೆ ಆ ಮಗೂನ."ಎಂದು ಅವಳ ಬಗ್ಗೆ ಕರುಣೆ ತೋರುತ್ತಾ ವೆಂಕಟನಿಗೆ ಹೇಳಿದಳು

"ಅಯ್ಯೋ,ಅಮ್ಮ ಅವಳ ಬೆನ್ನಲ್ಲಿ ತೊನ್ನು ಇತ್ತು.ಅವಳನ್ನು ಹೂತಾಕುವ ಬದಲು ಸುಟ್ಟಿದ್ರೆ ಈ ಥರ ಬರಗಾಲ ಬರುತ್ತಿರಲಿಲ್ಲ" ಎಂದು ಮುಂದುವರೆಸಿದ..

'ಅವಳಿಗೆ ತೊನ್ನು ಇದ್ದದಕ್ಕು ,ಮಳೆ ಬರದೆ ಇರೋದಕ್ಕೂ ಏನ್ಲಾ ಸಂಭಂದ "ಎಂದು ಗೌಡ ಗದರಿದ.

'ಆ ತೊನ್ನು ಭೂಮಿ ಒಳಗೆ ಕರಗಲ್ವಂತೆ ಬುದ್ಧಿ.. ಆ ಮೂಳೆಗಳು ಬೇರು ಬಿಡುತ್ತಂತೆ..ಅದು ಹಾಗೆ ಬೆಳಿತಾ ಹೋಗುತ್ತೆ.ಅಲ್ದೆ ಅವರ ಬಾಯಿ ಯಾವಾಗಲೂ ಕಿಸ್ಕೊಂಡೆ ಇರುತ್ತಂತೆ.ಅಂಥವರನ್ನ ಸುಡಬೇಕಂತೆ.ಹೂತಾಕಿದರೆ ಅದೊಂಥರ ಶಾಪ ಇದ್ದ ಹಾಗೆ,ಮಳೆ ಬರಲ್ವಂತೆ .ನೋಡಿ ಅವಳು ಸತ್ತಿದ್ದು ಯುಗಾದಿಗು ಮುಂಚೆ.ಅವತ್ತಿಂದ ಇವತ್ತಿನವರೆಗೂ ಒಂದು ಹನಿ ಮಳೆ ಬಂದಿಲ್ಲ": ಅಂದ..

ಗೌಡ ಯೋಚನಾ ಮಗ್ನನಾಗಿದ್ದಾಗ ವೆಂಕಟ ಮತ್ತೆ ಮುಂದುವರೆಸುತ್ತಾ "ಈ ವರ್ಷ ಈ ಅಶ್ವಿನಿ,ಭರಣಿ ಮಳೆ ಯಾವ್ದು ಬರಲಿಲ್ಲ.ಏಕಾದಶಿ ದಿನ ಕಡೆ ಪಕ್ಷ ಒಂದು ಹನಿನಾದ್ರು ಮಳೆ ಬರೋದು..ಈ ವರ್ಷ ಆ ಪಾಪ್ ಮುಂಡೆ ದೆಸೆ ಇಂದ ಒಂದೇ ಒಂದು ಹನಿ ಮಳೆ ಇಲ್ಲ..ಇನ್ನೊಂದೆರಡು ತಿಂಗಳು ಕುಡಿಯೋಕ್ಕೂ ನೀರಿರಲ್ಲ ನೋಡ್ತಿರ್ರಿ" ಅಂದ.

ಅಷ್ಟರೊಳಗೆ ಸ್ವಲ್ಪ ವಿಜ್ಞಾನ ಓದಿಕೊಂಡಿದ್ದ ಗೌಡನ ಹಿರಿ ಮಗ ಬಂದು: "ವೆಂಕಟಪ್ಪ ಚರ್ಮದಲ್ಲಿ ಮೆಲಾನಿನ್ ಅಂಶ ಕಡಿಮೆ ಆದಾಗ ಚರ್ಮ ಬಿಳಿ ಬಣ್ಣಕ್ಕೆ ತಿರುಗುತ್ತೆ.ಅದು ಒಂಥರಾ ಚರ್ಮ ರೋಗ ಅಷ್ಟೇ.ಅದಕ್ಕೂ ಮಳೆ ಬರದೇ ಇರೋದಕ್ಕೂ ಏನು ಸಂಭಂದ ಇಲ್ಲ. ಕುಡಿದು ಏನೇನೋ ಮಾತಾಡಬೇಡ ಹೋಗು"ಅಂದ..

"ನೋಡ್ತಿರ್ರಿ.ನೀವೆಲ್ಲ ,ಇವತ್ತು ಅವಳ ಹೆಣ ಹೊರಗೆ ತೆಗೆದು ಸುಡ್ತಿವಿ,ನಮ್ಮ ಹಟ್ಟಿಯವರು,ಬೆಸ್ತರ ಹಟ್ಟಿಯವರು ಎಲ್ಲ ಸೇರ್ಕೊಂಡು " ಎಂದು ತಾನು ಏನೋ ಸಾಧಿಸಲು ಹೊರಟಿರುವ ಹಾಗೆ ಬೀಗಿದ..

"ಯಾರೋ ನಿಂಗೆ ಇದನ್ನೆಲ್ಲಾ ಹೇಳಿದ್ದು "ಅಂದಾಗ "ಪಕ್ಕದ ಊರಿನ ಭೋರಾಚಾರಿ .ಅದೇ ಶಾಸ್ತ್ರ ಹೇಳುತ್ತಾನಲ್ಲ ಅವನು"ಅಂದ.

"ಗೌಡ್ರೆ,ಇವತ್ತು ಅಮಾವಾಸ್ಯೆ ಅಲ್ವ ಇವತ್ತೇ ಮಧ್ಯ ರಾತ್ರಿ ಹೆಣ ಹೊರಕ್ಕೆ ತೆಗೆದು ಸಡಬೇಕಂತೆ.ಇವತ್ತು ನಾವೊಂದು ೧೫-೨೦ ಜನ ನಮ್ಮ ಹಟ್ಟಿಯವರು ಹೋಗ್ತಿದ್ದೀವಿ .ಹೋದ ತಿಂಗಳು ಅಮಾವಾಸ್ಯೆ ದಿನ ಸಡಕ್ಕೆ ಯೋಚನೆ ಮಾಡಿದ್ವಿ.ಆ ಆಚಾರಿ ಯಾವ್ದೋ ಊರಿಗೆ ಪೂಜೆಗೆ ಹೋಗಿದ್ದ,ಅದಕ್ಕೆ ಈ ತಿಂಗಳು ಅಮಾವಾಸ್ಯೆ  ದಿನ ಪೂಜೆ ಮಾಡ್ತೀನಿ ಅಂತ ಹೇಳಿದ್ದ "

"ಮುಚ್ಕಂಡ್ ಹೋಗ್ಲಾ , ಆ ಅಚಾರಿಗೆ ಯಾವ್ದು ಗಂಟು ಹೊಡೆಯೋ ಪೂಜೆ ಇರಲಿಲ್ಲ ಅನ್ಸುತ್ತೆ ಈ ಅಮಾವಾಸ್ಯೆಗೆ ,ಅದಕ್ಕೆ ನಿಮಗೆ ಏನೇನೋ ತಲೆಗೆ ಹಚ್ಚಿದ್ದಾನೆ ಅವನು, ಮಳೆ ಬರೋ ಹಾಗಿದ್ರೆ ಹೋದ ತಿಂಗಳೇ ಸುಟ್ಟಿದ್ದರೆ ಇಷ್ಟೊತ್ತಿಗೆ ಮಳೆ ಬರೋದಲ್ವ " ಎಂದು ಕೇಳಿದ ..

"ಹೋಗ್ಲಿ ಬಿಡಿ,ನಾಳೆ ಒಳಗೆ ಮಳೆ ಬರ್ಲಿಲ್ಲ ಅಂದರೆ ಕೇಳಿ,ಅವಾಗ ಮಾತಾಡ್ತೀನಿ,ನಿನ್ನೆ ಪೂಜೆಗೆ ಬೇಕಾಗಿರೋ ಸಾಮನುಗಳನ್ನ ಕೊಡ್ಸಿ ಬಂದಿದ್ದೀವಿ."ಎಂದು ತಿರುಗುತ್ತರ ನೀಡಿ ಹಬ್ಬದ ಊಟ ಉಂಡು ಮನೆ ಕಡೆ ಹೊರಟ .

ಕುಡಿದ ಅಮಲಿನಲ್ಲಿ ವಾಕ್ ಇಲ್ಲದವನ ಹಾಗೆ ಮಾತಾಡುತ್ತಿದ್ದಾನೆ ಬಡ್ಡಿ ಮಗ,ನಾಳೆ ಬರಲಿ,ಜಾಡಿಸ್ತಿನಿ ಎಂದು ಗೊಣಗುತ್ತಾ ಒಳ ನಡೆದ ಗೌಡ..
 ______________________________________________

ಬೆಳ ಬೆಳಗ್ಗೆ ಬಾಗಿಲಿಗೆ ನೀರು ಹಾಕಿ ಸಾರಿಸಲು ಹೊರ ಬಂದ ಸರೋಜಮ್ಮ ಹಿಂದಿನ ದಿನ ರಂಗೋಲಿಯ ಮೇಲೆ ಇಟ್ಟಿದ್ದ ದೀಪ ತರಲು ಹೋದಾಗ ,ರಂಗೊಲಿಯೆಲ್ಲ ಅಳಿಸಿ ಹೋಗಿದ್ದು,ಸಾರಿಸಿದ ಸಗಣಿ ಎಲ್ಲ ಮರೆಯಾಗಿದ್ದು,ದೀಪಗಳು ಕೂಡ ರಾತ್ರಿ ಇಡೀ ಸುರಿದ ಮಳೆಯ ನೀರಿನ ಜೊತೆ ಕೊಚ್ಚಿ ಕೊಂಡು ಹೋಗಿತ್ತು ಅಷ್ಟರಲ್ಲಿ ಮನೆಯ ಕೆಲಸಕ್ಕೆ ಬಂದ ವೆಂಕಟನ ಹೆಂಡತಿ "ಅಮ್ಮ, ರಾತ್ರಿ,ಆ ಆಚಾರಿ,ಆ ಹುಚ್ಚಿ ಇದ್ಲಲ್ಲ ತೀರ್ಥಿ ,ಅವಳ ಹೆಣಾನ ಸಮಾಧಿ ಇಂದ ಹೊರಕ್ಕೆ ತೆಗೆದು ಸುಟ್ಟು ಹಾಕಿದನಂತೆ "ಎಂದಳು.

ಅವಳ ಧ್ವನಿಯಲ್ಲಿ ಆಶ್ಚರ್ಯ ಭಯ ಎಲ್ಲವೂ ಇತ್ತು ಮತ್ತು ಈ ಕಾರ್ಯ ಯೋಜನೆಯಲ್ಲಿ ಅವಳ ಗಂಡನ ಸಹ ಭಾಗಿತ್ವವೂ ಇದೆ ಮತ್ತು ಇದು ಮುಂಚೆಯೇ ಯೋಜಿಸಿದ್ದು ಎಂದು ಅವಳಿಗೆ ತಿಳಿದಂತೆ ಕಂಡು ಬರಲಿಲ್ಲ..

"ಅಯ್ಯೋ ಶಿವನೆ, ನೆನ್ನೆ ರಾತ್ರಿ ನಿನ್ನ ಗಂಡ ಹೇಳಿದಾಗ ನಾವು ಕುಡಿದು ಏನೇನೋ ಮಾತಾಡುತ್ತಿದ್ದಾನೆ ಅಂದು ಕೊಂಡಿದ್ವಿ ಆ ಆಚಾರಿ ಜೊತೆ ನಿನ್ನ ಗಂಡನೂ ಹೋಗಿದ್ದ ಅನ್ಸುತ್ತೆ " ಎಂದು ಹೇಳುತ್ತಾ "ಇನ್ನು ಏನೇನ್ ಕಾದಿದೆಯೋ ಈ ಊರಲ್ಲಿ" ಎಂದು ಗೊಣಗುತ್ತ ಮನೆ ಒಳ ಒಕ್ಕಳು ...

[ಈ ಕಥೆಯಲ್ಲಿ ಇರುವ ಪಾತ್ರಗಳು ಕಲ್ಪನೆ ಅಷ್ಟೇ... ಆದರೆ ಕೆಲವು ಸನ್ನಿವೇಶಗಳು ಕೆಲವು ಹಳ್ಳಿಗಳಲ್ಲಿ ಇರುವ ಒಂದು ಮೂಢ ನಂಬಿಕೆ.ಅದು ವಾಸ್ತವದ ಸಂಗತಿ ಕೂಡ ಹೌದು...]
(ಅಂದ ಹಾಗೆ ಬಹಳ ದಿನಗಳ ನಂತರ ಒಂದು ಕಥೆ ಬರೆದಿದ್ದೇನೆ..)

Wednesday, December 5, 2012

ಹನಿಗಳು

೧.ಅದೆಷ್ಟು ಸೊಕ್ಕು ನಿನ್ನ ಮುಂಗುರುಳಿಗೆ
ರೆಪ್ಪೆ ಹಾದು,ಕಣ್ಣಂಚನು ಸರಿದು
ಕೆನ್ನೆಯ ಸವರುವುದು....
ಆಗ ಅದೇನೋ ಸಂಕಟ ನನ್ನೊಳಗೆ
ಇಲ್ಲವಲ್ಲ ಈ ಅವಕಾಶ ಎಂದೂ ನನ್ನ ತುಟಿಗೆ....


೨.ಕಾಲಿಗೆ ಗೆಜ್ಜೆ ಕಟ್ತಾರೆ ನಮ್ಮ್ ಕೆಲವು ಹೆಣ್ಣ್ ಮಕ್ಕಳು
ಆದ್ರೆ ಯಾಕೋ ಒಂದೇ ಕಾಲಿಗ್ ಕಟ್ಟೋ ಗೀಳು..
ಇನ್ನೊಂದ್ ಎಲ್ಲವ್ವಾ,
ಬಿದ್ದ್ ಗಿದ್ದ್ ಹೊತೇನ್ ?
ಅಂತ ಕೇಳಿದ್ರೆ ಹೇಳ್ತಾರಾ
"ಯು ನೋ, ದಿಸ್ ಇಸ್ ಫ್ಯಾಶನ್ "
 

Thursday, October 25, 2012

ಏ ಮರವೇ....

ಸುಡು ಸುಡುವ ಬಿಸಿಲಲ್ಲಿ ಇಳಿದ ಬೆವರ
ಅಳಿಸುತ್ತಿತ್ತು ನಿನ್ನ ತಂಗಾಳಿಯ ಆದರ.
ಕರೆದು ಕರೆದು ಹಾದು ಹೋಗುತ್ತಿದ್ದ ಜನರ.
ಅದೆಷ್ಟು ಜನರಿಗೆ ನೀ ಮಾಡಿದೆಯೋ ಉಪಕಾರ ?

ರಸ್ತೆ ಅಗಲಿಸುವ ನೆಪವೊಡ್ಡಿತು ಸರಕಾರ
ನೀ ಉರುಳಿಬಿದ್ದೆ ನೆಲಕ್ಕೆ ಎತ್ತದೆ ಚಕಾರ.
ಇಲ್ಲಿಗೆ ಮುಗಿದಿತ್ತು, ನಿನ್ನ ಅವರ ನಡುವೆ ಸಮರ
ಇಲ್ಲಿಯವರೆಗೂ ನೀ ಆಗಿದ್ದೆ ಅಜರಾಮರ !!!

ಎಷ್ಟೋ ಜನರು ಊಡಿದ್ದರು ನಿನ್ನಡಿಯಲ್ಲಿ ಸಂಸಾರ
ಈಗ ಸೂರಿಲ್ಲದೆ ಅವರ ಗೋಳು ಅಪಾರ
ನಿನ್ನ ನೆನಪು ಮಾತ್ರ ಅಮರ !!

ನಿನ್ನ ಜೊತೆಗೆ ಮುಗಿಯಿತು ಹಕ್ಕಿಗಳ ಚಿಲಿಪಿಲಿ ಕಲರವ
ನೀ ಅವಕ್ಕೆ ಮಾಡಿದ ಉಪಕಾರ, ಮಧುರ ....

Wednesday, September 19, 2012

ನಾವು ಹಿಂಗೆ ಗಣಪತಿ ಇಡ್ತಿದ್ದಿದ್ದು...

ಕಳೆದ ವಾರ ಊರಿಗೆ ಹೋದಾಗ ಹಳೆಬೀಡಿನ ಸ್ನೇಹಿತ ಪೃಥ್ವಿ ಮನೆಗೆ ಹೋದೆ...ಅವನ ಮನೆಯ ಪಕ್ಕದಲ್ಲಿ ಆ ಬೀದಿಯ ಚಿಳ್ಳೆ ಮಿಳ್ಳೆ ಮಕ್ಕಳೆಲ್ಲ ಸೇರಿ ಗಣಪನ ಕೂರಿಸೋಕ್ಕೆ ಪೆಂಡಾಲ್ ರೆಡಿ ಮಾಡ್ತಿದ್ರು...ಇವನು "ಏನ್ರೋ ಇನ್ನು ಇಷ್ಟೇನಾ ಕೆಲ್ಸ ಆಗಿರೋದು,ಬೇಗೆ ಬೇಗ ರೆಡಿ ಮಾಡ್ರೋ" ಅಂದ...ಅಲ್ಲಿದ್ದ ಒಬ್ಬ ಹುಡ್ಗ"ಅಣ್ಣ,ನಿಮಗ್ಯಾಕೆ ಅದೆಲ್ಲ.ನಾವು ಒಟ್ಟಿನಲ್ಲಿ ಎಲ್ಲ ರೆಡಿ ಮಾಡಿದ್ರೆ ಆಯ್ತಲ್ವ? ನಿಮ್ಮ ಕೆಲ್ಸ ಗಣಪತಿ ಕೊಡ್ಸೋದು ಅಷ್ಟೇ" ಅಂದ..ಇನ್ನೊಬ್ಬ ಇದ್ದವನು"ಆಕಡೆ ಬೀದಿಯವ್ರು ಎರಡೂವರೆ ಅಡಿ ಗಣಪತಿ ಇಡ್ತಾರಂತೆ,ನಾವು ಆಗಿದ್ದು ಆಗ್ಲಿ ೪ ಅಡಿದು ಇಡಲೇ ಬೇಕು" ಅಂದ..ಇವನು"ಲೋ ಅಷ್ಟು ದೊಡ್ಡದು ಬೇಡ ಕಣ್ರೋ,೩ ಅಡಿದು ಸಾಕು" ಅಂದ್ರೆ "ಥೋ ಥೋ ಥೋ ಆಗಲ್ಲ,ತಲೆ ಮೇಲೆ ತಲೆ ಬೀಳಲಿ,ಅವರಗಿಂತ ದೊಡ್ಡದು ಕೂರಿಸ್ಲೆ ಬೇಕು,ಇಲ್ಲ ಅಂದ್ರೆ ಹಳೆ ಸಂತೆ ಬೀದಿಗೆ ಮರ್ಯಾದೆ ಇರತ್ತಾ"ಅಂದ... "ಏನಾದ್ರೂ ಮಾಡ್ಕಂಡು ಹಾಳಾಗಿ ಹೋಗಿ,ಎಷ್ಟೋ ಒಂದು ಇಡ್ರಿ ಅತ್ಲಾಗಿ" ಅಂತ ಹೇಳಿ ಹೊರಟ್ವಿ..ಹಿಂದೆ ಯಿಂದ "ಹಾಸನ್ ಇಂದ ತರಬೇಕು,ಈ ಲೋಕಲ್ ಗಣಪತಿ ಆಗಲ್ಲ" ಅಂತ ಇನ್ನೊಬ್ಬ ಕಿರುಚಿದ .."ನೋಡ್ಲಾ ಗಿರಿ,ಈ ಬಡ್ಡಿ ಮಕ್ಳು,ಕೊಡ್ಸಕ್ಕೆ ಒಪ್ಕಂಡಿದ್ದೀನಿ,ಕೇಳಿದ್ದು ಕೊಡ್ಸದೆ ಇದ್ರೆ ಮರ್ಯಾದೆ ತಗಿತಾರೆ" ಅಂದ..

ಇದನ್ನ ನೋಡಿದಾಗ ನಾವು ಚಿಕ್ಕವರಿದ್ದಾಗ ಗಣಪತಿ ಕೂರಿಸ್ತಿದ್ದ ಪರಿ,ನಮ್ಮ ಉತ್ಸಾಹ,ಮನೆ ಮನೆ ಸುತ್ತಿ ದುಡ್ಡು ಎತ್ತಿದ್ದು,ಹಬ್ಬದ ಪ್ರಯುಕ್ತ ನಡೆಯುತ್ತಿದ್ದ ವಿವಿಧ ಆಟೋಟಗಳು ,ವಿಸರ್ಜನೆ ದಿನ ಬಹುಮಾನ ವಿತರಣೆ ಎಲ್ಲ ಒಮ್ಮೆಲೇ ಗಿರಕಿ ಹೊಡೆಯೋಕ್ಕೆ ಶುರು ಆಯಿತು...ಯಾರಾದ್ರೂ ದುಡ್ಡು ಕೊಡೋಕ್ಕೆ ಸತಾಯ್ಸಿದ್ರೆ "ಏನ್ ಅಂಕಲ್,ಇಷ್ಟು ದುಡ್ಡು ಮನೆಗೆ ಇಷ್ಟೇನಾ ದುಡ್ಡು"ಅಂತೆಲ್ಲ ಪೀಡಿಸಿ ವಸೂಲಿ ಮಾಡ್ತಿದ್ವಿ...೬ ವರ್ಷ ಹಾಸನದಲ್ಲಿದ್ದ ಸಮಯದಲ್ಲಿ ನಮ್ಮ ಬೀದಿಗೂ ಪಕ್ಕದ ಬೀದಿಗೂ ಪ್ರತಿ ವರ್ಷ ಗಣಪನ್ನ ಕೂರಿಸೋ ವಿಚಾರದಲ್ಲಿ ಪೈಪೋಟಿ.. ಯಾರು ದೊಡ್ಡ ಗಣಪನ್ನ ಕೂರಿಸ್ತಾರೆ,ಯಾರು ಜಾಸ್ತಿ ದಿನ ಇಟ್ಟಿರ್ತಾರೆ..ಯಾರು ಚೆನ್ನಾಗಿ ಅಲಂಕಾರ ಮಾಡಿದ್ದಾರೆ..ಹೀಗೆ ... ಬೀದಿ ಬೀದಿಗಳ ಪೈಪೋಟಿಗೆ ಪಾಪ ಮುಗ್ಧ ಗಣಪ ಬಲಿ ಆಗ್ತಿದ್ದ...

ಇಲಿ ಪುರಾಣ:
ಒಂದು ವರ್ಷ ಏನಾಯ್ತು ಅಂದ್ರೆ,ಗೌರಮ್ಮ ಮತ್ತೆ ಗಣಪನ್ನ ಕೂರ್ಸಿ ಪೂಜೆ ಗೀಜೆ ಎಲ್ಲ ಆಯ್ತು,ಮೈಕ್ ಸೆಟ್ ಎಲ್ಲ ಜೋಡ್ಸಿದ್ವಿ,ಜೋರಾಗಿ ಹಾಡು ಹಾಕಿ ಕುಣಿತಿದ್ವಿ..ನಮ್ಮ ಬೀದಿಯ ಒಬ್ರು ಮಹನೀಯರು ಪೂಜೆ ಮಾಡಿಸ್ಕಂಡ್ ಹೋಗೋಕ್ಕೆ ಬಂದವರು,ಒಮ್ಮೆಲೇ"ಎಲ್ರೋ ಹುಡುಗರ,ಗಣಪತಿ ಇದೆ,ಇಲಿನೆ ಇಲ್ವಲ್ರೋ" ಅಂದ್ರು..ಆಗ ನಾವೆಲ್ಲ ಸೇರಿ ಎಲ್ಲೋಯ್ತು ಎಲ್ಲೋಯ್ತು ಅಂತ ವಿಮರ್ಶೆ ಮಾಡಿದಾಗ,ಎಲ್ಲರು ನಂಗೊತ್ತಿಲ್ಲ ನೊಂಗೊತ್ತಿಲ್ಲ ಅಂದ್ರು.ಆಮೇಲೆ ಅಂಗಡಿಗೆ ತರಕ್ಕೆ ಹೋಗಿದ್ದ ಒಬ್ಬ ಪುಣ್ಯಾತ್ಮ ಆಟೋದಲ್ಲಿ ಹಿಂದೆ ಇಟ್ಟಿದ್ದೆ,ಅಲ್ಲೇ ಮರ್ತೆ ಅನ್ಸುತ್ತೆ ಅಂದ..ಆಗ ಇನ್ನೇನ್ ಮಾಡೋದು ಆ ಅಟೋದವನನ್ನ ಹುಡುಕೋ ಕೆಲ್ಸ ಅಂತು ಆಗಲ್ಲ,ಸರಿ ಅಂತ ಮತ್ತೆ ಅಂಗಡಿಗೆ ಹೋದ್ರೆ ಅವನು ಬರಿ ಇಲಿ ಕೊಡಕ್ಕೆ ಆಗಲ್ಲ ,ಒಂದೊಂದು ಗಣಪತಿಗೆ ಒಂದೊಂದು ಇಲಿ ಮಾಡಿರ್ತಿವಿ ಅಂದ.ಎಷ್ಟೇ ದಮ್ಮಯ್ಯ ಅಂದ್ರು, ಕೊಡಲ್ಲ,ಬೇಕಾದ್ರೆ ಗಣಪತಿ ತಗೊಳ್ಳಿ,ಅದರ ಜೊತೆಗೆ ಇಲಿ ಕೊಡ್ತೀನಿ ಅಂದ..ಸರಿ ಕೊಡಪ್ಪ ಅಂತ ತಂದು ಇಟ್ಟಿದ್ದು ಆಯ್ತು...ಆಮೇಲೆ ಆಟೋದಲ್ಲಿ ಇಲಿ ಬಿಟ್ಟು ಬಂದವನಿಗೆ ಎಲ್ಲರು ಸೇರಿ ಬೈದಿದ್ದೇ ಬೈದಿದ್ದು...

ಆಗ ನಮಗೆ ಇದ್ದ ಒಂದು ನಂಬಿಕೆ ಏನು ಅಂದ್ರೆ ಗಣಪತಿ ಹಬ್ಬದ ದಿನ ಚಂದ್ರನನ್ನು ನೋಡಬಾರದು ಅಂತ..ನೋಡಿದ್ರೆ ಆ ವರ್ಷ ಪೂರ್ತಿ ನಮಗೆ ಒಳ್ಳೇದ್ ಆಗಲ್ಲ ಅಂತ..ನಾವು ಹುಡುಗರಂತು ಯಾರಾದ್ರೂ ನೋಡಿಲ್ಲ ಅಂದ್ರೆ ಅವನನ್ನ ಕೈ ಕಾಲು ಹಿಡಿದು ಮೇಲಕ್ಕೆ ಮುಖ ಮಾಡಿ ಚಂದ್ರನ್ನ ತೋರಿಸ್ತಿದ್ವಿ..ಇದೆಲ್ಲಾ ತಮಾಷೆ ಈಗ

ಆಮೇಲೆ ಸ್ವಲ್ಪ ದಿನ ಆದ್ಮೇಲೆ ವಿಸರ್ಜನೆ ಕಾರ್ಯಕ್ರಮ.ನಾವಿನ್ನು ಚಿಕ್ಕ ಹುಡುಗರು,ಎಲ್ಲಿ ಬಾವಿಗೆ ಬಿದ್ದು ಬಿಡ್ತಾರೋ ಅಂತ ನಮ್ಮನ್ನ ಕಳಿಸ್ತಿರ್ಲಿಲ್ಲ.ಆಟೋದಲ್ಲಿ ಮೆರೆವಣಿಗೆ ಮಾಡಿ ಜವೆನಹಳ್ಳಿ ಮಠದ ಬಾವಿಯಲ್ಲಿ ಕೆಲವು ದೊಡ್ಡವರು ಹೋಗಿ  ಬಿಟ್ಟು ಬರ್ತಿದ್ರು,ಆದರೆ ಆ ೬ ವರ್ಷದಲ್ಲಿ ಒಂದೇ ಒಂದು ಸಾರಿ ನಮ್ಮ ಬೀದಿಯ ಗಣಪನ ವಿಸರ್ಜನೆ ಮಾಡೋದನ್ನ ನೋಡಕ್ಕೆ ಆಗಿರಲಿಲ್ಲ..

ಅಲ್ಲದೆ ಒಂದು ಬಟ್ಟಲಿನಲ್ಲಿ ಅಕ್ಷತೆ ಕಾಳು(ಅಕ್ಕಿ ಮತ್ತು ಹರಿಶಿನ) ಹಿಡಿದು ಇಡೀ ಹಾಸನ ಸುತ್ತುತಿದ್ವಿ...  ಆ ದಿನ  ಒಟ್ಟು ೧೦೮ ಗಣಪತಿಯನ್ನು ನೋಡೋದು ನಮ್ಮ ಗುರಿ...ಮನೆ ಮನೆ,ಬೀದಿ ಬೀದಿ ಸುತ್ತಿ ಒಟ್ಟು ೧೦೮ ಗಣಪನನ್ನು ನೋಡಿ ಬರ್ತಿದ್ವಿ...

ಅದರ ಮುಂದಿನ ವರ್ಷ ನಮ್ಮೂರಿಗೆ,ನಮ್ಮ ಹಳ್ಳಿಗೆ ಬಂದಾಗ ಅಲ್ಲಿ ಹಬ್ಬದ ಆಚರಣೆ ಇನ್ನೂ ಚೆನ್ನಾಗಿತ್ತು.ಅಲ್ಲಿಂದ ಮುಂದೆ ಪ್ರತಿ ವರ್ಷ ಹಳ್ಳಿಯ ಜೀವನದ ಜೊತೆ ನಾನು ಬೆರೆತು ಹೋಗಿದ್ದೆ.ನನಗೆ ತುಂಬ ಕುಶಿ ಕೊಟ್ಟಿದ್ದು ನಮ್ಮ ಹಳ್ಳಿಯ ಆಚರಣೆ ಮತ್ತು ಸಂಪ್ರದಾಯ.

ಇನ್ನು ಮನೆನಲ್ಲಿ ಚೌಥಿ ಹೊಡೆಯದು..ಅದಕ್ಕೆ ಒಂದಷ್ಟು ಪುಸ್ತಕ,ಸೇರು ಕುಡುಗೋಲು ಎಲ್ಲ ಹಿಡವ್ರು..ನಾನಂತು ನನಗೆ ಕಷ್ಟದ ವಿಷಯದ ಪುಸ್ತಕ ಹಿಡ್ತಿದ್ದೆ..ಗಣಪ ಏನಾದ್ರೂ ಕೃಪೆ ತೋರಬಹುದು ಅಂತ.. ನಮ್ಮ ಮನೇಲಿ ಸಿಕ್ಕ ಸಿಕ್ಕಿದ್ದಕ್ಕೆಲ್ಲ ಈಡು ಕಾಯಿ ಹೊಡೆಯವ್ರು..ಮಾರನೆ ದಿನ ಅದೇ ಕಾಯಲ್ಲಿ ಕಾಯಿ ಕಡುಬು ಮಾಡೋವ್ರು...

ನಮ್ಮೂರಲ್ಲಿ ಗಣಪತಿ ಕೂರಿಸೋ ಮುಂಚೆ ಗಂಗೆ ಪೂಜೆ ಎಲ್ಲ ಮಾಡಿ ವಾದ್ಯದವರ ಜೊತೆ ಗಣಪನ್ನ ತಂದು ಕೂರಿಸ್ತಿದ್ವಿ.ಊರೆಲ್ಲ ಕೇಳೋ ಹಗೆ ಮೈಕ್ ಸೆಟ್ ಇರಲೇ ಬೇಕಿತ್ತು..ಇಲ್ಲೂ ಕೂಡ ಸುತ್ತ ಮುತ್ತ  ಉರಿನವರಿಗಿಂತ ದೊಡ್ಡದನ್ನು ಕೂರಿಸಬೇಕು ಅಂತ ಪೈಪೋಟಿ..ಅದು ಅಲ್ದೆ ಪ್ರತಿ ವರ್ಷ ನಮ್ಮ ಊರಲ್ಲೇ ಗಣಪತಿಯನ್ನ ಮಾಡ್ತಿದ್ವಿ,ಅಲ್ಲೇ ಸುತ್ತ ಮುತ್ತ ಎಲ್ಲಿಂದನಾದ್ರು ಜೇಡಿ ಮಣ್ಣು ತಂದು ಮಾಡಿಸ್ತಿದ್ವಿ.ಯಾವುದೇ ಅಂಗಡಿ ಇಂದ ತರೋ ಪ್ರಮೇಯವೇ ಇರಲಿಲ್ಲ.
ಇದೆಲ್ಲ ಆದಮೇಲೆ ಪ್ರತಿ ದಿನ ಸಂಜೆ ಪೂಜೆ ಇರ್ತಿತ್ತು, ಪ್ರತಿ ದಿನ ಒಂದೊಂದು ಮನೆ ಇಂದ ಚರ್ಪು ಮಾಡಬೇಕಿತ್ತು.೮.೩೦ಕ್ಕೆ ಸರಿಯಾಗಿ ಯಾರಾದ್ರೂ ಘಂಟೆ ಬಾರಿಸವ್ರು,ಅದೇ ಟೈಮ್ ಅಲ್ಲಿ ಯಾಕಂದ್ರೆ ಎಲ್ಲ ಚಾನೆಲ್ ಗಳಲ್ಲಿ ವಾರ್ತೆ ಬರೋ ಸಮಯ ಅದು..ಅಪ್ಪಿ ತಪ್ಪಿ ಕೂಡ ಜನ ಧಾರವಾಹಿ ಮಿಸ್ ಮಾಡ್ಕೊತಾರೆಯೇ? ಆಗಾಗಿ ಎಲ್ಲರೂ ಧಾರಾವಾಹಿ ನೋಡಿ ಘಂಟೆ ಸದ್ದು ಕೇಳಿದ ಕೂಡಲೇ ದೇವಸ್ಥಾನದ ಬಳಿ ಹಾಜರ್. ಪೂಜೆ ಆಗಿ ನೈವೇದ್ಯೇ ಆದಮೇಲೆ ಚರ್ಪು ಹಂಚೋ ಕಾರ್ಯಕ್ರಮ.೯.೦೦ ಘಂಟೆ ಒಳಗೆ ಪೂಜೆ ಎಲ್ಲ ಆಗಿ ಮುಂದಿನ ಧಾರವಾಹಿ ನೋಡೋಕ್ಕೆ ಅಣಿ ಆಗ್ತಿದ್ರು..

ಇನ್ನು ಸ್ವಲ್ಪ ದಿನ ಆದ್ಮೇಲೆ ಗಣಪತಿ ಬಿಡೋ ಕಾರ್ಯಕ್ರಮ..ನಮ್ಮೂರಲ್ಲಿ ಒಂದು ಹೊಯ್ಸಳರ ಕಾಲದ ಕಲ್ಯಾಣಿ ಇದೆ..ಅದು ಬತ್ತಿ ಹೋಗಿ ಬಹಳ ವರ್ಷಗಳೇ ಆಗಿದೆ..ವರ್ಷ ಪೂರ್ತಿ ಅದರ ಒಳಗೆ ಕೆಲಸಕ್ಕೆ ಬಾರದ ಗಿಡ ಗಂಟೆಗಳು,ಸೀಮೆ ಸೀಗೆ,ಮುಟ್ರು ಮುನಿ(ಮುಟ್ಟಿದರೆ ಮುನಿ,ಟಚ್ ಮಿ ನಾಟ್) ಬೆಳೆದಿರುತ್ತದೆ..ಆದರ ಗಣಪನ ದೆಸೆಯಿಂದ ವರ್ಷಕ್ಕೆ ಒಂದು ಸಾರಿ ಆ ಗಿಡಗಳನ್ನೆಲ್ಲ ಕಿತ್ತು ಸ್ವಚ್ಛ ಮಾಡ್ತಿದ್ವಿ..ಸುತ್ತ ಮುತ್ತ ಯಾರದಾದರು ಪಂಪ್ ಇಂದ ನೀರು ಬಿಟ್ಟು ತುಂಬಿಸ್ತಿದ್ವಿ..ಗಣಪತಿ ಬಿಡಬೇಕಲ್ಲಾ ಆಗಾಗಿ... ಆಗ ಚಿಕ್ಕ ಮಕ್ಕಳಾದ ನಮಗೆ ಸುಗ್ಗಿಯೋ ಸುಗ್ಗಿ..

ಈಜು ಬರದವರು ಈಜು ಕಲಿಯೊಕ್ಕೆ ಎಲ್ಲ ಬಹಳ ಸಹಾಯ ಆಗ್ತಿತ್ತು...ಆಗ ಕೆಲವರ ಮನೆಯಲ್ಲಿ ಈಜು ಬುರುಡೆ ಇತ್ತು.. ಈಜು ಬುರುಡೆ ಅಂದ್ರೆ ಒಂದೇ ಜಾತಿಯ ಸೋರೆಕಾಯಿಯನ್ನು ಒಣಗಿಸಿ ಅದಕ್ಕೆ ಹಗ್ಗ ಕಟ್ಟಿ ಇರ್ತಿದ್ರು..ನಾವು ಅದನ್ನ ಬೆನ್ನಿಗೆ  ಕಟ್ಟಿಕೊಂಡು ಈಜು ಆಡ್ತಿದ್ವಿ...ನಮ್ಮೂರಿನ ಬಹುತೇಕ ಮಕ್ಕಳು ಈಜು ಕಲಿತಿದ್ದು ,ಆ ಬುರುಡೆಯ ಮೂಲಕವೇ...ನನ್ನ ಬಳಿ ಆ ರೀತಿಯ ಬುರುಡೆ ಇಲ್ಲದ ಕಾರಣ,ಅವರಿವರ ತೋಟದಲ್ಲಿ ಹುಡುಕಿ,ಕೊನೆಗೂ ಒಂದು ಸೋರೆಕಾಯಿ ತಂದು,ಅದನ್ನ ಒಣಗಿಸಿ ದೊಡ್ಡಪ್ಪನ ಹತ್ತಿರ ಅದಕ್ಕೆ ಹಗ್ಗ ಕಟ್ಟಿ ಕೊಡೋಕ್ಕೆ ಹೇಳಿದ್ದೆ..ನನ್ನ ದುರದೃಷ್ಟವಶಾತ್ ಆ ಸೋರೆಕಾಯಿ ಹೊಡೆದು ಹೋಯಿತು..ನನ್ನ ಕನಸು ಛಿದ್ರ ಛಿದ್ರ ಆಯ್ತು.ಕೆಲವರು ಮುಲಾಜಿಲ್ಲದೆ ಕೊಡಲ್ಲ ಅಂತಿದ್ರು,ಆಗಾಗಿ ನನಗೆ ಬೇರೆಯವರನ್ನ ಕೇಳೋಕ್ಕೆ ಒಂಥರಾ ಮುಜುಗರ,ಆದರು ಕೆಲವು ಸ್ನೇಹಿತರು ಸ್ವಲ್ಪ ಒತ್ತು ಈಜಾಡಲು ಕೊಡ್ತಿದ್ರು.

ನನ್ನ ಕಷ್ಟ ನೋಡಕ್ಕೆ ಆಗದೆ ನನ್ನ ದೊಡ್ಡಪ್ಪ,ನಮ್ಮ ತೋಟದಲ್ಲಿರುವ ಕಲ್ಲು ಬಾವಿಗೆ ಕರ್ಕಂಡ್ ಹೋಗಿ ನನಗೆ ಈಜು ಕಲ್ಸೋಕ್ಕೆ ಶುರು ಮಾಡಿದ್ರು..ಸುಮಾರು ೭೦-೮೦ ಅಡಿಯ ಬಾವಿ ನಮ್ಮ ತೋಟದಲ್ಲಿರೋದು...ಮೊದ ಮೊದಲು ಉಡುದಾರ ಹಿಡಿದು,ಕಾಲು ಬಡಿಯೋದು ಕೈ ಬಡಿಯೋದು ಎಲ್ಲ ಹೇಳಿ ಕೊಡ್ತಿದ್ರು.ಆಮೇಲೆ ಒಂದೆರಡು ದಿನ ಆದಮೇಲೆ ಕೂದಲು ಹಿಡಿದು ಮೂರ್ನಾಲ್ಕು ಬಾರಿ ಮುಳುಗಿಸಿ ದಮ್ಮಯ್ಯ ಅಂದ್ರು ಕರುಣೆ ತೋರದೆ ನೀರು ಕುಡಿಸಿ ಮೇಲಕ್ಕೆ ಎತ್ತುತ್ತಿದ್ದರು.. ಆಮೇಲೆ ಸೊಂಟಕ್ಕೆ ನಮ್ಮ ಮನೆಯ ಹೋರಿಯ ಹಗ್ಗಗಳನ್ನು ಕಟ್ಟಿ ಮೇಲಿಂದ ನನ್ನನ್ನು ಬಿಸಾಕಿ ಈಜು ಹೊಡೆಯಲು ಹೇಳ್ತಿದ್ರು..ಅವರು ಬಾವಿಯ ಸುತ್ತ ಹಗ್ಗ ಹಿಡಿದು ಸುತ್ತವ್ರು..ಕೊನೆಗೂ ನನಗೆ ಏನೇನೋ ಹರ ಸಾಹಸ ಮಾಡಿ ಈಜು ಕಲ್ಸಿದ್ರು...ನಮ್ಮ ಅಪ್ಪ ಒಂದ್ಸಲ ಬಾವಿಗೆ ಬಿದ್ದಿದ್ದಾಗ ನಮ್ಮ ದೊಡ್ದಪ್ಪನೆ ಮೇಲಕ್ಕೆ ಎತ್ತಿದ್ರಂತೆ..ಆಗಾಗಿ ನನಗೆ ಇವರ ಮೇಲೆ ಸ್ವಲ್ಪ ಧೈರ್ಯ ಇತ್ತು...

ಇನ್ನು ಗಣಪತಿ ಬಿಡೋ ಹಿಂದಿನ ದಿನ ನಂದಿ ಧ್ವಜ ಕುಣಿತ,ಕೆಲೋವೊಮ್ಮೆ ಕೀಲು ಕುದುರೆ ಎಲ್ಲ ಇರ್ತಿತ್ತು...ಎಲ್ಲ ಮನೆಯಲ್ಲೂ ಮತ್ತೆ ಹಬ್ಬ...ಮಾರನೆ ದಿನ ಬೆಳಗ್ಗೆ ೭.೦೦ ಘಂಟೆಗೆ ಮೆರವಣಿಗೆ ಶುರು... ಎಲ್ಲ ಮನೆಯ ಮುಂದೆ ಹೋಗಿ,ಪ್ರತಿ ಮನೆ ಇಂದ ಮಂಗಳಾರತಿ ಆಗಿ ಮುಂದೆ ಸಾಗುತ್ತಿತ್ತು..ನಮ್ಮ ಪಟಾಲಂ ಹುಡುಗರಿಗೆ ಬಣ್ಣ ಎರಚಿಕ್ನ್ದು ಕುಣಿದು ಕೊನೆಗೆ ಬಾವಿಗೆ ಹೋಗಿ ಬೀಳ್ತಿದ್ವಿ..ಯಾರಾದ್ರೂ ಅಪ್ಪಿ ತಪ್ಪಿ ಬಣ್ಣ ಹಚ್ಚಿಸಿಕೊಳ್ಳಲ್ಲ ಅಂದ್ರೆ ಮುಗಿತು ಅವನ ಕಥೆ..ನಾವು ದೊಡ್ಡವರ ಸಹವಾಸಕ್ಕೆ ಹೋಗ್ತಿರ್ಲಿಲ್ಲ,ಒಮ್ಮೆ ಮಾತ್ರ ಒಬ್ಬ ಪುಣ್ಯಾತ್ಮನ ಬಿಳಿ ಅಂಗಿಗೆ ಬಣ್ಣ ಬಿತ್ತು,ಮೆರವಣಿಗೆ ನಡುವೆಯೇ ಅದೆಂಗೆ ಮುಂದಕ್ಕೆ ಹೋಗ್ತಿರಾ,ಅಂತ ಕಿತಾಪತಿ ತೆಗೆದ.ಆಮೇಲೆ ಕೆಲವು ಹಿರಿಯರು ಎಲ್ಲ ಸೇರಿ "ಏನೋ ಮಕ್ಳು,ಆಡ್ತವ್ರೆ.ಹೋಗ್ಲಿ ಬಿಡಪ್ಪ ಅಂತ ಸಮಾಧಾನ ಮಾಡೋಕ್ಕೆ ಹೋದ್ರೆ ಅವರ ಜೊತೆ ಜಗಳಕ್ಕೆ ಬಿದ್ದರು.ಆಮೇಲೆ ಇನ್ನೊಬ್ರು"ಲೋ,ವಂಕ ನಿನ್ನ ಮಗನು ಬಣ್ಣ ಆಡ್ತಾವ್ನೆ,*** ಮುಚ್ಕಂಡು ಹೋಗ್ಲ" ಅಂತ ಬೈದಾಗ ಸುಮ್ನಾದ್ರು.

ಕೊನೆಗೆ ಮೆರವಣಿಗೆ ಮುಗ್ಸಿ ಬಾವಿ ಹತ್ತಿರ ಬಂದು ಬೆಲ್ಲದ ಹಚ್ಚಿನ ಮಣೆ(ತೆಪ್ಪದ ರೀತಿಯಲ್ಲಿ) ಮೇಲೆ ಗಣಪನ್ನ ಕೂರ್ಸಿ ಎರಡೂ ಕಡೆ ಹಗ್ಗ ಹಾಕಿ ಎಳೆದು ಬಾವಿ ಮಧ್ಯಕ್ಕೆ ತಂದು ಜೈ ಗಣಪ ಅಂತ ಕೂಗಿ ಆ ಮಣೆಯನ್ನು ಬಲಗಡೆಗೆ ತಿರುಗಿಸಿ ವಿಸರ್ಜನೆ ಮಾಡ್ತಿದ್ರು... ಆ ಸಮಯದಲ್ಲಿ ಯಾರಾದ್ರೂ ಈಜು ಬರುವವರು ಬಾವಿಗೆ ಇಳಿಯದೆ ಅವರ ಕಥೆ ಮುಗಿಯಿತು.ಅವರಾಗೆ ಇಳಿದರೆ ಬಚಾವು,ಇಲ್ಲ ಅಂದ್ರೆ ಉಟ್ಟ ಬಟ್ಟೆಯಲ್ಲೇ ಅವರನ್ನ ಬಾವಿಗೆ ಬಿಸಾಡೋ ಪದ್ಧತಿ...ಅಲ್ಲಿ ಹೋಗ್ಬೇಕು,ಇಲ್ಲಿಗೆ ಹೋಗ್ಬೇಕು,ಜಪ್ಪಯ್ಯ,ದಮ್ಮಯ್ಯ ಅಂದ್ರು ಯಾರೂ ಕೇಳ್ತಿರಲಿಲ್ಲ..ಬೇಕಾದ್ರೆ ಬಟ್ಟೆ ಚೇಂಜ್ ಮಾಡ್ಕಂಡ್ ಹೋಗು ಅಂತ ಹೇಳಿ ಸೀದಾ ಬಾವಿಗೆ ಬಿಸಾಕೋದೇ...ಅವರು ದೊಡ್ಡವರಾದರು ಪರವಾಗಿಲ್ಲ,ಚಿಕ್ಕವರಾದ್ರು ಪರವಾಗಿಲ್ಲ....

ಅದು ಅಲ್ದೆ ಯಾವತ್ತಾದ್ರು ಒಂದು ದಿನ ಊರಿನ ದೇವಸ್ಥಾನದ ಹತ್ತಿರ ಟಿವಿ ಮತ್ತೆ ವಿಸಿಪಿ,ವಿಸಿಡಿ ತಂದು ರಾತ್ರಿ ಇಡೀ ಒಂದಷ್ಟು ಚಲನಚಿತ್ರಗಳನ್ನು ನೋಡೋ ಕಾರ್ಯಕ್ರಮಗಳು ಇರ್ತಿದ್ವು...ಆಗಿನ್ನೂ ವಿಸಿಡಿ ಕಾಲ..ಇನ್ನು ಸಿಡಿ ಎಲ್ಲ ಇರ್ಲಿಲ್ಲ ಅವಾಗ...

ಹೀಗೆ ಸಾಗ್ತಿತ್ತು ನಮ್ಮೂರಿನ ಗಣಪತಿ ಹಬ್ಬದ ಪುರಾಣ...



                      ಎಲ್ಲರಿಗೂ ಅವ್ವ-ಮಗ ಒಳ್ಳೇದ್ ಮಾಡ್ಲಿ... ಹಬ್ಬದ ಶುಭಾಶಯಗಳು..

                                 ಅವಧಿಯಲ್ಲಿ ಈ ಲೇಖನ: ನಮೂರ್ ಗಣಪ್ಪನ ಪುರಾಣ...

Photo-Courtesy:Intenet

Monday, September 3, 2012

ನೆನಪಿನ ಬುತ್ತಿಯಲಿ "ಆ ದಿನಗಳು"

೫ನೆ ಕ್ಲಾಸ್ ತನಕ ಹಾಸನದಲ್ಲಿ ಓದಿ,ನಂತರ ಕಾರಣಾಂತರಗಳಿಂದ ಮರಳಿ ಊರಿಗೆ ಬರಬೇಕಾಯಿತು.ನಂತರ ೨ ವರ್ಷ ಹಳೇಬೀಡಿನಲ್ಲಿ ಓದಿ,ಹೈ ಸ್ಕೂಲಿಗೆ ,ಮತ್ತೆ ಬೇರೆ ಊರಿಗೆ ಸೇರಬೇಕಾದ ಪರಿಸ್ಥಿತಿ ಬಂತು.ಮತ್ತೆ ಹಾಸನವೋ ಅಥವಾ ಮಂಗಳೂರು ಸುತ್ತ ಮುತ್ತ ಯಾವುದಾದರು ವಸತಿ ಶಾಲೆಗೋ ಎಂಬ ಗೊಂದಲದಲ್ಲಿದ್ದಾಗ ಕಡೆಯದಾಗಿ ಬೇಲೂರಿಗೆ ಸೇರುವುದು ಎಂದು ನಿಶ್ಚಯವಾಯಿತು.ಮನೆಯಲ್ಲಿ ಒಮ್ಮತದ ತೀರ್ಮಾನವೂ ಆಯಿತು.ನಮ್ಮ ಕ್ಲಾಸಿನಿಂದ ನಾವು ೪ ಜನ ಒಂದು ಶಾಲೆಗೆ,ಇನ್ನು ೪ ಜನ ಇನ್ನೊಂದು ಶಾಲೆಗೆ ಸೇರಿಕೊಂಡೆವು.ಅಲ್ಲಿವರೆಗೂ ಕೇವಲ ಸ್ಕೂಲು,ಮನೆ,ಹೊಲ,ತೋಟ ಇವಷ್ಟೇ ನಮ್ಮ ಪ್ರಪಂಚ ಆಗಿತ್ತು.ಅದು ಬಿಟ್ಟರೆ ಆಗೊಮ್ಮೆ ಹೀಗೊಮ್ಮೆ ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನ ಅಥವಾ ಜೈನ ಬಸದಿಗಳಿಗೆ ನಾವೆಲ್ಲಾ ಹೋಗುತ್ತಿದ್ದೆವು.ಏನೇ ಮಾಡಬೇಕೆಂದರೂ,ಎಲ್ಲಿಗೆ ಹೋಗಬೇಕೆಂದರೂ ನಮ್ಮೆಲ್ಲರ ಮನೆಯಿಂದ ಅನುಮತಿ ಬೇಕಿತ್ತು.ಸ್ವತಂತ್ರ ಸ್ವಲ್ಪ ಕಡಿಮೆಯೇ ಇತ್ತು ಅನ್ನಬಹುದು.ಯಾವಾಗ ನಾವೆಲ್ಲರೂ ಬೇಲೂರಿಗೆ ಹೈ ಸ್ಕೂಲಿಗೆ ಸೇರಿಕೊಂಡೆವೋ ಆಗ ಸ್ವಲ್ಪ ಸ್ವತಂತ್ರವಾಗಿ ,ಸ್ವಚ್ಚಂದವಾಗಿ ಓಡಾಡ ತೊಡಗಿದೆವು.ಮನೆಗೆ ಲೇಟಾಗಿ ಹೋದರೆ ಯಾವಗಾಲೋ ರೆಡಿಮೇಡ್ ಉತ್ತರ ಇರುತ್ತಿತ್ತು."ಬಸ್ ಲೇಟ್,ನಾವೇನ್ ಮಾಡಕ್ಕಾಗುತ್ತೆ" ಅನ್ನೋದು.ಒಟ್ಟಿನಲ್ಲಿ ಅಲ್ಲಿವರೆಗೂ ಸರಿಸೃಪಗಳಂತಿದ್ದ ನಾವುಗಳು ಒಮ್ಮೆಲೇ ಬಾಲ ಬಿಚ್ಚಿದ ವಾನರರಂತೆ ಆದೆವು.

ಪ್ರತಿ ದಿನ ಬೆಳಗ್ಗೆ ೮.೦೦ ಘಂಟೆಗೆ ನಮ್ಮ ಬಸ್ಸು.ಅಷ್ಟರೊಳಗೆ ನಮ್ಮ ಊರಿಂದ ಸೈಕಲ್ಲಿನಲ್ಲಿ ಹಳೇಬೀಡಿಗೆ ಹೋಗಿ,ಅಲ್ಲಿ ಪರಿಚಯದವರ ಅಂಗಡಿಯ ಮುಂದೆ ಅದನ್ನು ನಿಲ್ಲಿಸಿ ಹೋಗಬೇಕಾಗಿತ್ತು.ಮತ್ತೆ ಅರ್ಧ ಘಂಟೆ ಪ್ರಯಾಣದ ನಂತರ ಬೇಳೂರು ತಲುಪುತ್ತಿದ್ದೆವು.ಅಲ್ಲಿ ಬಸ್ ನಿಲ್ದಾಣದಿಂದ ಸುಮಾರು ಒಂದೂವರೆ ಕಿಲೋ ಮೀಟರ್ ದೂರದಲ್ಲಿ ನಮ್ಮ ಶಾಲೆ... ನಮ್ಮೆದುರಿಗಿನ ಶಾಲೆಗೆ ನಮ್ಮ ಕ್ಲಾಸಿನ ಇನ್ನು ೪ ಜನ ಸೇರಿದ್ದರು..ನಾವೆಲ್ಲರೂ ಪ್ರತಿ ದಿನ ಒಟ್ಟಿಗೆ ಪ್ರಯಾಣ,ಮತ್ತೆ ಶಾಲೆಯ ಹತ್ತಿರ ಬಂದಾಗ ಅವರು ಅವ್ರ ಸ್ಕೂಲಿನ ಕಡೆ,ನಾವು ನಮ್ಮ ದಾರಿ ಹಿಡಿದು ಹೋಗುತ್ತಿದ್ದೆವು.
 
ಪ್ರತಿ ಸೋಮವಾರ ಸಂತೆ ಮುಗಿಸಿ ಕುಡಿದು ಬರುವವರ ಜೊತೆ ಜಗಳ ಕಾಯುತ್ತಿದ್ದದ್ದು,ಪಾಸ್ ಇರುವವರು ನಿಂತ್ಕೊಂಡು ಟಿಕೆಟ್ ಇರುವವರಿಗೆ ಸೀಟ್ ಬಿಡಿ ಅನ್ನುವ ಕಂಡಕ್ಟರ್ ಗಳಿಗೆ ನಾವು ಬಡ್ಡಿ ದುಡ್ಡಲ್ಲಿ ಓಡಾಡುತ್ತಿದ್ದೇವೆ ಅಂತ ದಬಾಯಿಸುತ್ತಿದ್ದದ್ದು(ಯಾರಾದರು ವಯಸ್ಸಾದವರು ಬಂದ್ರೆ ಸೆಟ್ ಬಿಟ್ಟು ಕೊಡುವ ಸೌಜನ್ಯ ನಮ್ಮೆಲ್ಲರಲ್ಲೂ ಇತ್ತು,ಆದರೆ ಬೇರೆಯವರಿಗೆ ಅಷ್ಟು ಸುಲಭವಾಗಿ ಬಿಡುತ್ತಿರಲಿಲ್ಲ), ಬೇರೆಯವರು ನಮ್ಮನ್ನು ಹೊಡೆಯಬೇಕು ಅನ್ನುವಷ್ಟು  ಸಿಟ್ಟು ಬರುವ ಹಾಗೆ ಜೋರು ಜೋರಾಗಿ ಕೂಗಾಡುತ್ತಿದ್ದದ್ದು,ಗಲಾಟೆ ಮಾಡುತ್ತಿದ್ದದ್ದು..ಹೀಗೆ ಒಂದೇ ಎರಡೇ ನಮ್ಮ ಆಟಗಳು...
ಒಟ್ಟಿನಲ್ಲಿ ದಿನೇ ದಿನೇ ನಮ್ಮ ಬಾಲ ಬೆಳೆಯುತ್ತಲೇ ಹೋಯಿತು...
 
ಆ ಸಮಯದಲ್ಲಿ  ನಡೆದ ಕೆಲವು ಘಟನೆಗಳನ್ನು ಹಂಚಿ ಕೊಳ್ಳಬೇಕು ಅನ್ನೋದು ನನ್ನ ಬಯಕೆ.

ಶಿವಪ್ರಸಾದ ಅಲಿಯಾಸ್ ಶುಕ್ಲಾಚಾರಿ ಕಲ್ಲು ಹಿಡಿದು ನಿಂತಿದ್ದು:

ಹಳೇಬೀಡಿನಿಂದ ಬೇಲೂರಿಗೆ ೧೬ ಕಿಲೋಮೀಟರ್.ಮುಂಚೆ ಎಕ್ಸ್ ಪ್ರೆಸ್ ಬಸ್ಸಿನಲ್ಲಿ ಹೆಬ್ಬಾಳು ಅನ್ನುವ ಗ್ರಾಮದಲ್ಲಿ ಮಾತ್ರ ನಿಲುಗಡೆ ಇತ್ತು.ಅದು ಹಳೇಬೀಡಿನಿಂದ ೯ ಕಿ.ಮಿ ದೂರದಲ್ಲಿದೆ.. ಕೆಲವು ದಿನದ ನಂತರ ಫಾರಂ ಗಡಿ(ಹಳೇಬೀಡಿನಿಂದ ೪ ಕಿ.ಮಿ) ಅನ್ನುವ ಕಡೆ ನಿಲುಗಡೆ ಕೊಡಬೇಕಾಗಿ ಸುತ್ತೋಲೆ ಹೊರಡಿಸಲಾಯಿತು.ನಮ್ಮ ಈ ಕಥೆಯ ಹೀರೋ ಶಿವಪ್ರಸಾದ ಆ ಗಡಿಯಿಂದ ೨ ಕಿ.ಮಿ ದೂರದ ಊರಿನಿಂದ ಬರುತ್ತಿದ್ದ.ಹಳೇಬೀಡು ಬೇಲೂರಿನ ಮಧ್ಯದಲ್ಲೇ ಅವನ ಉರು ಇತ್ತಾದರೂ ಅಲ್ಲಿ ನಿಲುಗಡೆ ಇಲ್ಲದ ಕಾರಣ,ಮತ್ತು ಯಾವಾಗಲು ಗ್ರಾಮೀಣ ಬಸ್ಸನ್ನೇ ನೆಚ್ಚಿಕೊಂಡು ಇರಲು ಸಾಧ್ಯ ವಾಗದೆ ಪ್ರತಿ ದಿನ ತನ್ನ ತಂಗಿಯೊಡನೆ ಹಳೇಬೀಡಿಗೆ ಸೈಕಲ್ಲಿನಲ್ಲಿ ಬಂದು ಅಲ್ಲಿಂದ ಬಸ್ಸು ಅತ್ತುತ್ತಿದ್ದ.ಯಾವಾಗ ಆ ಫಾರಂ ಗಾಡಿಯಲ್ಲಿ ನಿಲುಗಡೆ ಕೊಡಬೇಕು ಅಂತ ಘೋಷಣೆ ಆಯಿತೋ,ಆಗಿನಿಂದ ಅಲ್ಲಿಗೆ ಬಂದು ಬಸ್ಸು ಏರಲು ಶುರು ಮಾಡಿದ.

ದುರದೃಷ್ಟವಶಾತ್ ಕೆಲವು ಚಾಲಕರು ಮೊದಮೊದಲು ಅಲ್ಲಿ ನಿಲ್ಲಿಸಲು ಸಪ್ಪೆ ಮೊರೆ ಮಾಡುತ್ತಿದ್ದರು.ಈ ಪುಣ್ಯಾತ್ಮ ಶುಕ್ಲಾಚಾರಿಗೆ ಅವರ ನೆಂಟರೊಬ್ಬರು ಸಾರಿಗೆ ಇಲಾಖೆಯಲ್ಲಿ ಇದ್ದರು ,ಅವರ ಮುಖಾಂತರ ಈ ವಿಷಯ ತಿಳಿದು,ಸುತ್ತೋಲೆ ಹೊರಡಿಸಿದ ಮಾರನೆಯ ದಿನವೇ ಅಲ್ಲಿ ಬಸ್ಸಿಗಾಗಿ ಕಾದಿದ್ದ.ನಾವೆಲ್ಲರೂ ಇವನು ಬಹುಷಃ ಇವತ್ತು ರಜ ಹಾಕಿದ್ದಾನೆ ಅಂದುಕೊಂಡು ಸುಮ್ಮನಿದ್ದೆವು.ನೋಡಿದರೆ ಫಾರಂ ಗಡಿ ನಿಲ್ದಾಣದಲ್ಲಿ ಕೈ ಅಡ್ಡ ಹಿಡಿದು ಬಸ್ಸು ನಿಲ್ಲಿಸಿ ಅಂತ ನಿಂತಿದ್ದ.ನಮ್ಮ ಡ್ರೈವರ್ ಮುಕುಂದಪ್ಪ ಆಗಲ್ಲ  ಆಗಲ್ಲ ಅಂತ ಕೈ ಸನ್ನೆ ಮಾಡಿ ಹೊರಟ.ಸರಿ ಹಿಂದೆ ಯಿಂದ ಯಾವುದೋ ಟೆಂಪೋಗೆ ಬಂದ ಅನ್ನಿಸುತ್ತೆ,ಸಂಜೆ ಮತ್ತೆ ಅದೇ ಬಸ್ಸಿಗೆ ವಾಪಸ್ ಬರಬೇಕಾದರೆ ಬೇಲೂರು ಬಸ್ ಸ್ಟ್ಯಾಂಡ್ನಲ್ಲೆ ಜಗಳ ತೆಗೆದ."ಫಾರಂ ಗಾಡಿಯಲ್ಲಿ ನಿಲ್ಲಿಸಬೇಕು ಅಂತ circulation ಇದೆ,ನೀವು ನೋಡಿದ್ರೆ ಇವತ್ತು ಬೆಳಗ್ಗೆ ನಿಲ್ಲಿಸಲಿಲ್ಲ,ಇನ್ನು ಮುಂದೆ ಹೀಗೆ ಮಾಡಿದ್ರೆ ಸರಿ ಇರಲ್ಲ ನೋಡಿ,ಇವಾಗ್ಲು ಅಲ್ಲಿ ಸ್ಟಾಪ್ ಕೊಡ್ಬೇಕು " ಅಂತ ಡ್ರೈವರ್,ಕಂಡಕ್ಟರ್ ಇಬ್ಬರಿಗೂ ವಾರ್ನಿಂಗ್ ಕೊಟ್ಟು ಬಸ್ಸು ಹತ್ತಿದ.ನಾವೆಲ್ಲಾ ಸುಮ್ಮನೆ ನೋಡ್ತಾ ಇದ್ವಿ.ಅವತ್ತು ಸಂಜೆ ವಾಪಸ್ ಹೋಗಬೇಕಾದ್ರೆ ಫಾರಂ ಗಡಿ ಹತ್ತಿರ ಬಂದಾಗ ಮತ್ತೆ ಸ್ಟಾಪ್ ಕೊಡಲಿಲ್ಲ."ಯಾಕ್ರೀ ಸ್ಟಾಪ್ ಕೊಡಲ್ಲ ನೀವು,ಇವಾಗ ನಿಲ್ಲಿಸದೆ ಇದ್ರೆ ನಾಳೆ ನೀವು ಈ ರೂಟಲ್ಲಿ ಬರೋ ತಾಕತ್ತು ಇದ್ದೀಯ ನಿಮಗೆ" ಅಂತ ದಬಾಯಿಸಿದ.
"ನಿಲ್ಲಿಸಲ್ಲ ಕಣೋ ಅದೇನ್ ಕಿತ್ಕೊತಿಯ,ಕಿತ್ಕೊ" ಅಂದ ಡ್ರೈವರ್.
"ನನ್ನತ್ರ ಡಿಪೋ ಇಂದ ತಂದಿರೋ ಲೆಟರ್ ಇದೆ,ನಿಮ್ಮ ಮೇಲೆ ಕಂಪ್ಲೇಂಟ್ ಕೊಡ್ತೀನಿ" ಅಂದ ಇವ್ನು.
ನಾವೆಲ್ಲಾ ಸೇರಿ,ಇವತ್ತು ಅವನು ಸೈಕಲ್ ತಂದಿಲ್ಲ,ಹಳೇಬೀಡಿಗೆ ಅವನು ಬಂದ್ರೆ,ನಡೆದು ಕೊಂಡು ಅಥವಾ ಆಟೋಗೆ ಬರಬೇಕು,ಇಲ್ಲೇ ಸ್ಟಾಪ್ ಕೊಟ್ಟು ಬಿಡಿ ಇವತ್ತೊಂದಿನ ಅನ್ದ್ವ್ವಿ,ಸರಿ ಅಂತ
ಸುಮಾರು ಅರ್ಧ ಕಿ.ಮಿ ಹೋದ ಮೇಲೆ ಬಸ್ಸು ನಿಲ್ಲಿಸಿ "ಇಳ್ಕೋ ಹೋಗು,ಜಾಸ್ತಿ ಮಾತಡಬೇಡ" ಅಂತ ಡ್ರೈವರ್,ಕಂಡಕ್ಟರ್ ಇಬ್ರು ಹೇಳಿದ್ರು.
"ನಾಳೆ ನಿಲ್ಲಿಸದೆ ಇದ್ರೆ ಕಲ್ಲು ಹೊಡಿತೀನಿ,ನನ್ನ ಹತ್ರ ಲೆಟರ್ ಕೂಡ ಇದೆ" ಅಂತ ಹೇಳಿ ತನ್ನ ತಂಗಿ ಜೊತೆ ಇಳಿದು ಹೋದ.
ಇಳಿಬೇಕಾದರೆ ಅಪ್ಪ,ಅಕ್ಕ,ಅವ್ವ ಎಲ್ಲರನ್ನು ನೆನಪಿಸಿ ಹೋಗಿದ್ದ ಅಸ್ಸಾಮಿ.ಮಾರನೆ ದಿನ ಬಸ್ಸು ನಿಲ್ಲಿಸದೆ ಇದ್ದರೆ ಇವನು ಖಂಡಿತ ಕಲ್ಲು ಹೊಡಿತಾನೆ ಅನ್ನುವುದರಲ್ಲಿ ಯಾವುದೇ ಸಂಶಯ ಇರಲಿಲ್ಲ..ಯಾಕಂದ್ರೆ ಬಹಳ ಭಂಡ ಇವನು .. ೭ನೆ  ಕ್ಲಾಸ್  ನಲ್ಲಿದ್ದಾಗ ಒಮ್ಮೆ ಕನ್ನಡ ಪೀರಿಯಡ್ ನಲ್ಲಿ "ಚಕ್ರವ್ಯೂಹ ರಚಿಸಿದ್ದು ಯಾರು" ಎಂದು ಇವನಿಗೆ ಪ್ರಶ್ನೆ ಕೇಳಲಾಗಿತ್ತು,ಉತ್ತರ ಗೊತ್ತಿಲ್ಲದ ಇವನಿಗೆ,ಅವನ ಪಕ್ಕದಲ್ಲಿದ್ದ ವಿನೋದ್ ಎಂಬುವನು "ಶುಕ್ಲಾಚಾರಿ" ಅಂತ ತಪ್ಪು ಉತ್ತರ ಹೇಳಿಕೊಟ್ಟಿದ್ದ,ಇವನು ಅದನ್ನೇ ಮೇಡಂ ಹತ್ತಿರ ಒದರಿದಾಗ, ಅವರು  ಬೈದು ,"ದ್ರೋಣಾಚಾರ್ಯ" ಅನ್ನೋದು ಗೊತಿಲ್ವ ನಿನಗೆ ಅಂದಿದ್ದರು.
Immediately,he reacted.ಸರಿಯಾಗಿ ಬೆನ್ನಿಗೆ ಬಿತ್ತು ನೋಡಿ ವಿನೋದನಿಗೆ  ಶಿವ ಪ್ರಸಾದನಿಂದ ಪ್ರಸಾದ(ಏಟು) ,ಮೇಡಂ ಮುಂದೇನೆ...

 ಈ ನನ್ ಮಗನ ಹತ್ರ ಯಾವ್ ಲೆಟರ್ರೋ,ಅದೇನ್ ಕಥೆನೋ ಅಂತ ನಾವು ಯೋಚಿಸ್ಕೊಂಡು,ಅಲ್ಲ ಈ ಬಡ್ಡಿ ಮಗ ಕಲ್ಲು ಹೊಡಿತೀನಿ ಅಂತಾನಲ್ಲ,ನಿಜವಾಗಲು ಇವನಿಗೆ ಅಷ್ಟು ಮೀಟರ್ ಇದ್ಯಾ ಅಂತ ಯೋಚಿಸ್ತಾ ಮಾರನೆ ದಿನ ಬಂದ್ರೆ,ಮತ್ತೆ ಹಳೇಬೀಡಿನಲ್ಲಿ ಬಸ್ ಹತ್ತಲಿಲ್ಲ..ಅಲ್ಲೇ ಫಾರಂ ಗಾಡಿಯಲ್ಲಿ ನಿಂತಿದ್ದ.ಹಿಂದಿನ ದಿನ ಹೇಳಿದ ಹಾಗೆ,ಎಡಗೈಯಲ್ಲಿ ಒಂದು ಲೆಟರ್,ಬಲಗೈಯಲ್ಲಿ ಒಂದು ದಪ್ಪ ಕಲ್ಲು ಹಿಡಿದು ನಿಂತಿದ್ದ.ಜೊತೆಗೆ ಅವನ ತಂಗಿ ಬಿಟ್ಟರೆ ಇನ್ನ್ಯಾರು ಇರಲಿಲ್ಲ ಅಲ್ಲಿ.ನಾವು ಯಾವಾಗಲು ಮುಂದಿನ ಸೀಟಿನಲ್ಲಿ ಕೂರುತ್ತಿದ್ದರಿಂದ ಒಂದು ರೀತಿ ಭಯವೂ ಶುರು ಆಯಿತು.ಅಪ್ಪಿ ತಪ್ಪಿ ಅವನು ಕಲ್ಲು ಹೊಡೆದರೆ ಎಲ್ಲಿ ನಮ್ಮ ಮೇಲೆ ಬೀಳುತ್ತೋ ಅಂತ.
ಕೊಪಗ್ರಸ್ಥನಾಗಿ ತನ್ನ ಕೈಯನ್ನು ಮೇಲಕ್ಕೆ ಎತ್ತಿದಾಗ ನಮ್ಮ ಉದ್ದ ಮೂತಿ ಮುಕುಂದನಿಗೆ ಗಾಬರಿ ಆಗಿ,ಬಸ್ಸು ನಿಲ್ಲಿಸಿದ.ಸರಿ ಬಸ್ಸು ಹತ್ತಿದ ಕೂಡಲೇ ಆ ಲೆಟರ್ ಅನ್ನು ಕಂಡಕ್ಟರ್ ಮತ್ತು ಡ್ರೈವರ್ ಇಬ್ಬರಿಗೂ ತೋರಿಸಿ,"ಇಲ್ಲಿ ನೋಡಿ,ಡಿಪೋ ಇಂದ ತಂದಿದ್ದೀನಿ" ಅಂತ ತೋರಿಸಿದ.ಅವಾಗ,ಹಿಂದಿನ ದಿನ ಸ್ವಲ್ಪ ಗಾಂಚಲಿ ಮಾಡಿದ್ದ ಡ್ರೈವರ್ ಮತ್ತು ಕಂಡಕ್ಟರ್ ಇಬ್ರೂ ಸುಮ್ಮನಾದರು.
ಅವತ್ತಿನಿಂದ ಅವರು ಅಲ್ಲಿ ನಿಲ್ಲಿಸಲು ಶುರು ಮಾಡಿದರು.ಆ ಬಸ್ಸು ಅರಸೀಕೆರೆ ಡಿಪೋಗೆ ಸೇರಿದ್ದು,ಮತ್ತು ಅವರು ಅಲ್ಲಿಂದ ಪ್ರತಿ ದಿನ ಬೆಳಗ್ಗೆ ೫.೩೦ಕ್ಕೆ ಹೊರಡುವುದು,ಅಲ್ಲದೆ  ಸಂಜೆ ತಲುಪುವುದು ೬.೩೦ಕ್ಕೆ.ಆದ್ದರಿಂದ ಅವರಿಗೆ ಆ ಸುತ್ತೋಲೆ ತಲುಪಿರಲಿಲ್ಲ,ಮತ್ತೆ ೨-೩ ದಿನದ ನಂತರ ಬೇರೆ ಬಸ್ಸಿನ ಚಾಲಕರು,ನಿರ್ವಾಹಕರು ವಿಷಯ ತಿಳಿಸಿದ್ದರಿಂದ ಅವರಿಗೆ ಸ್ವಲ್ಪ ತಡವಾಗಿ ವಿಷಯ ತಿಳಿಯಿತು ಅಷ್ಟೇ.


ಸರಿ ಅವತ್ತು ಬಸ್ಸು ಇಳಿದು ಶಾಲೆಯ ಕಡೆ ಹೆಜ್ಜೆ ಹಾಕುವಾಗ,ನಮಗೆ ಈ ಶುಕ್ಲಾಚಾರಿ  ಹೀರೋ ಆಗಿ ಬಿಟ್ಟಿದ್ದ..ನಮಗೆ ದಾರಿಯಲ್ಲಿ ಹೋಗುವಾಗ,ಅದು ಇದು ಭೊಗಳೆ ಹೊಡೆಯಲು ಶುರು ಮಾಡಿದ"ಇವತ್ತು,ಆ **ಮಕ್ಳು ನಿಲ್ಲಿಸದೆ ಹೋಗಿದ್ರೆ,ತೋರಿಸ್ತಿದ್ದೆ ಅವ್ರಿಗೆ,ನಾನ್ ಏನು ಅಂತ" ಅಂದ.ನಾವೆಲ್ಲಾ ಸೇರಿ,"ನೆಡ್ಯಲ್ಲೋ ಮುಚ್ಕಂಡು,ನಿನ್ ಬ್ಯಾಳೆ ಗೊತ್ತಿಲ್ವ ನಮಗೆ" ಅನ್ದ್ವ್ವಿ."ಥೋ ಅವರವ್ವನ್,ಆ ನನ್ ಮಕ್ಳು ನಾಳೆ ಈ ರೂಟಲ್ಲಿ ಬರಕ್ಕೆ ಆಗ್ತಿತ್ತೇನ್ಲ ಗಿರಿಯ,ಬಚಾವಾದರು " ಅಂತ ತಾನು ಏನೋ ಸಾಧಿಸಲು ಹೊರಟಿದ್ದೆ ಅನ್ನುವ ಹಾಗೆ ಬಡಾಯಿ ಕೊಚ್ಚಿಕೊಂಡ.ಅವನ ಕೆಲವು ಮಾತುಗಳು ಸ್ವಲ್ಪ ಅತಿಶಯೋಕ್ತಿ ಆದರೂ ನಾವೆಲ್ಲಾ ಕೇಳ್ಕೊಂಡು ಸುಮ್ಮನಾದ್ವಿ.
 
ಪಾಸ್ ಕಳೆದು ಕೊಂಡು ಒಂದು ವಾರ ಬಿಟ್ಟಿ ಓಡಾಡಿದ್ದು:
 
ಬಹುಷಃ ಒಂಬತ್ತನೇ ತರಗತಿಯಲ್ಲಿದ್ದಾಗ ಅನ್ಸುತ್ತೆ,ಜನವರಿ ತಿಂಗಳು ಇರಬಹುದು.ಎಂದಿನಂತೆ ಸಂಜೆ ಶಾಲೆ ಇಂದ ಹೊರಟು ಬಸ್ಸು ಏರಿ ಹೊರಟೆವು,ನೋಡಿದರೆ ನನ್ನ ಜೇಬಲ್ಲಿ ಪರ್ಸ್ ಕಾಣೆ,ಪರ್ಸ್ ಅಂದರೆ ಜೊತೆಗೆ ನನ್ನ ಬಸ್ ಪಾಸ್ ಕೂಡ ಮಂಗಮಾಯ,ಅಲ್ಲದೆ ಹತ್ತು ರುಪಾಯಿ ದುಡ್ಡು ಬೇರೆ.ನನಗೆ ಗಾಬರಿ ಶುರು ಆಯಿತು,ಥೋ ಏನ್ ಮಾಡದಪ್ಪ ಇವಾಗ,ಇನ್ನು ೩ ತಿಂಗಳು ಇದೆ ನಮ್ಮ ವಾರ್ಷಿಕ ಪರೀಕ್ಷೆ ಮುಗಿಯೋಕೆ,ಅಲ್ಲದೆ ಈ ಸಮಯದಲ್ಲಿ ಮತ್ತೆ ಪಾಸ್ ಮಾಡಿಸಿಕೊಳ್ಳಲು  ಆಗಲ್ಲ,ದುಡ್ಡು ಕೊಟ್ಟು ಓಡಾಡಬೇಕು,ಅಪ್ಪನ ಹತ್ತಿರ ಪಾಸ್ ಕಳ್ಕೊಂಡೆ ಅಂತ ಅಂದ್ರೆ ಬಯ್ಗುಳ,ಇದೆಂತ ಪರಿಸ್ಥಿತಿ ಬಂತು ನಂಗೆ ಅಂತ ಯೋಚನೆ ಮಾಡ್ತಾ,ನನ್ನ ಸ್ನೇಹಿತರ ಹತ್ರ ವಿಚಾರ ಮಾಡಿದಾಗ,"ಲೋ ಮಗಾ,ನೋಡೋ ಬೆಳಗ್ಗೆ ಹೆಂಗೂ ಮುಕುಂದನ ಬಸ್ಸಿಗೆ ಬರೋದು,ಆ ಕಂಡಕ್ಟರ್ ನಮ್ಮನ್ನ ಯಾವತ್ತೂ ಪಾಸ್ ತೋರ್ಸಿ ಅಂತ ಕೇಳಲ್ಲ" ಅಂತ ಒಬ್ಬ ಅಂದ್ರೆ,ಇನ್ನೊಬ್ಬ",ಸಂಜೆ ಬೇರೆ ಬೇರೆ ಗಾಡಿಗೆ ಬಂದ್ರು ಕೂಡ,ಕೆಲವರು ಸ್ಟೂಡೆಂಟ್ ಹತ್ರ ಪಾಸ್ ಇರುತ್ತೆ ಅಂತ ಕೇಳೋ ಗೋಜಿಗೆ ಹೋಗಲ್ಲ,ಇನ್ನು ಕೆಲವರು ಲಾಸ್ಟ್ ೩ ನಂಬರ್ ಕೇಳಿ ಬರ್ಕೊತಾರೆ,ಹಂಗು ಹಿಂಗು ಕೆಲವು ಪಿರ್ಕಿ ನನ್ ಮಕ್ಳು ಕೇಳ್ತಾರೆ,ಆಗ ಹಾಲ್ಫ್(ಅರ್ಧ) ಟಿಕೆಟ್ ತಗಂಡ್ರೆ ಆಯ್ತು ಬಿಡು" ಅಂದ.
ಬಹುತೇಕ ಎಲ್ಲಾ ಕಂಡಕ್ಟರ್ ಗಳು ಪರಿಚಯ ಇದ್ದ ಕಾರಣ ನನಗೆ ಅಷ್ಟು ಚಿಂತೆ ಆಗಲಿಲ್ಲ.ಇನ್ನೊಬ್ಬ"ಲೋ ಶನಿವಾರ ಧರ್ಮಸ್ಥಳ ಗಾಡಿಗೆ ಬರಬೇಕು,ಆ ಡಿಪೋ ಕಂಡಕ್ಟರ್ ಗಳು ತಲೆ ಪ್ರತಿಷ್ಠೆಗಳು,ಅವತ್ತು ಒಂದು ದಿನ  ಟಿಕೆಟ್ ತಗಳಲೇ ಬೇಕು " ಅಂದ.ಅಷ್ಟರಲ್ಲಿ ನಮ್ಮ ಜೂನಿಯರ್ ಒಬ್ಬ"ಅಣ್ಣ,ಸಂಜೆ ಲೋಕಣ್ಣನ ಗಾಡಿಗೆ ಹೋದ್ರೆ ಆಯಿತು,ಅವರಿಗೆ ಪಾಸ್ ಕಳ್ದು ಹೋಗಿದೆ ಅಂದ್ರು ಕೂಡ ನಡೆಯುತ್ತೆ,ಯಾವ್ದಾದ್ರು ಹಳೆ ಟಿಕೆಟ್ ಕೊಡ್ತಾರೆ' ಅಂದ,ಸ್ನೇಹಿತರ ಅಭಯ ನುಡಿಗಳಿಂದ ನನಗೆ ಗಜ ಬಲ ಬಂದ ಹಾಗೆ ಆಯ್ತು.ಅವತ್ತು ಮನೆಗೆ ಹೋಗಿ ಅಮ್ಮನ ಹತ್ರ ಹಿಂಗಿಂಗೆ ಕಳೆದು ಹೋಗಿದೆ,ತಾವು ದೊಡ್ಡ ಮನಸ್ಸು ಮಾಡಿ ತಮ್ಮ ಯಜಮಾನರಿಗೆ ಈ ವಿಷಯ ತಿಳಿಸದ ಹಾಗೆ ಇನ್ನೆರಡು ತಿಂಗಳು  ಸ್ವಲ್ಪ ದುಡ್ಡು ಕೊಡಿ,ಟಿಕೆಟ್ ತಗಂಡು ಓಡಾಡಬೇಕು ಆಗಾಗಿ,ಹಾಗೆ ಸ್ವಲ್ಪ ಸೀಕ್ರೆಟ್ ಆಗಿ ಇಡಿ ಈ ವಿಷಯವನ್ನು ಅಂತ ಹೇಳಿದ್ದೆ.
 
ಇದೆ ರೀತಿ ಸುಮಾರು 2-3 ದಿನ ಪಾಸು ಇಲ್ಲದೆ,ಟಿಕೆಟು ಇಲ್ಲದೆ  ಓಡಾಡಿದೆ,ಭಾನುವಾರ ಕಳೆಯಿತು ಸೋಮವಾರ ಬಂತು,ಅವತ್ತು ಬೇಲೂರಿನಲ್ಲಿ ವಾರದ ಸಂತೆ,ಪ್ರತಿ ಸೋಮವಾರ ಸಂಜೆ ಬಸ್ಸು ಯಾವಾಗಲು ತುಂಬಿರುತ್ತೆ,ಅವತ್ತು ಕೂಡ.೪ ದಿನದಿಂದ ಶುರು ಆಗಿದ್ದ ಚಾಳಿಯಂತೆ ,ಟಿಕೆಟ್ ತಗೊಳ್ಳದೆ ಪ್ರಯಾಣ ಮಾಡಿದ್ದು ಆಯಿತು,ಇನ್ನೇನು ಫಾರಂ ಗಡಿ ದಾಟಿ,ಹಳೇಬೀಡು ಇನ್ನು ೨ ಕಿ.ಮಿ ಇದೆ,ಅಷ್ಟರಲ್ಲಿ ಚೆಕ್ಕಿಂಗ್ ನವರು ಬಸ್ಸ್ ಅಡ್ಡ ನಿಲ್ಲಿಸಿ ಹತ್ತಿದರು.ಭಯ ಶುರು ಆಗಿದ್ದು ಅವಾಗ,ಎಷ್ಟು ದಂಡ ಕಟ್ಟಬೇಕೋ ಅಂತ,ಹೇಗೂ ಬಸ್ಸು ಪೂರ್ತಿ ತುಂಬಿದ್ದರಿಂದ,ಅಲ್ಲದೆ ನಾವು ಮುಂದೆ ಕೂತಿದ್ದರಿಂದ ಪ್ರತಿಯೊಬ್ಬರ ಟಿಕೆಟ್ ಚೆಕ್ ಮಾಡಿಕೊಂಡು ಮುಂದೆ ಬರುವಷ್ಟರಲ್ಲಿ ಹಳೇಬೀಡು ತಲುಪಿತ್ತು.ಅಲ್ಲಿ ಬಸ್ಸ್ ನಿಲ್ದಾಣ ತಲುಪುವ ಮೊದಲು ಇನ್ನೊಂದು ಸ್ಟಾಪ್ ಇತ್ತು,ಅಲ್ಲಿ ನನ್ನ ಜೂನಿಯರ್ ಪವನ್ ಇಳಿದು,ಬೇಗೆ ಮುಂದೆ ಬಂದು ಡ್ರೈವರ್ ಹತ್ತಿರ ತನ್ನ ಪಾಸನ್ನು ಕೊಟ್ಟು ಹೋದ.ಅವ್ರು ಅದನ್ನ ನನಗೆ ಕೊಟ್ರು.ಆ ಚೆಕ್ಕಿಂಗ್ ನವರು ನನ್ನ ಹತ್ತಿರ ಬಂದಾಗ ನಾನು ಅವನ ಪಾಸನ್ನು ತೋರಿಸಿದೆ,ಅವರು ಕೂಡ ನಮ್ಮ ಹತ್ತಿರ ಇದ್ದೆ ಇರುತ್ತೆ ಅಂತ ಫೋಟೋ ಎಲ್ಲಾ ನೋಡಲು ಹೋಗಲಿಲ್ಲ.ಒಟ್ಟಿನಲ್ಲಿ ಅವತ್ತು ಪವನ್ ಮತ್ತು ನಮ್ಮೆಲ್ಲರ ಒಂದು ಪ್ಲಾನ್ ಇಂದ ಬಚಾವಾದೆ.ಅವಾಗ ಇನ್ ಮುಂದೆ ಈ ರೀತಿ ಆದ್ರೆ ಏನ್ ಮಾಡೋದು ಅಂತ ಯೋಚೆನ್ ಶುರು ಆಯಿತು.ಸಧ್ಯ ನನ್ನ ಪುಣ್ಯಕ್ಕೆ ನನ್ನ ಪರ್ಸ್ ಒಬ್ಬರಿಗೆ ಬೇಲೂರು ಬಸ್ ಸ್ಟಾಂಡ್ ಹತ್ತಿರ ಸಿಕ್ಕಿತ್ತು,ಅವರು ನಮ್ಮ ಹಳೆಬೀಡಿನ  ಪ್ಲಾಟ್ ಫಾರ್ಮ್ಮಿಗೆ ಬಂದು,ನನ್ನ ಪಾಸಿನಲ್ಲಿ ಇದ್ದ ನಮ್ಮ ಶಾಲೆಯ ವಿವರಗಳನ್ನೆಲ್ಲ ನೋಡಿ,ನಮ್ಮ ಇನ್ನೊಬ್ಬ ಜೂನಿಯರ್ ಚರಣ್ ಎನ್ನುವನ ಹತ್ತಿರ ಕೊಟ್ಟಿ ಹೋಗಿದ್ದರು.ಅವನು ಕೆಲವು ದಿನ ಬೆಳಗ್ಗೆ ಮತ್ತು ಸಂಜೆ ಸ್ಪೆಷಲ್ ಕ್ಲಾಸ್ ಮತ್ತು ಒಂದೆರಡು ದಿನ ಶಾಲೆಗೇ ಚಕ್ಕರ್ ಹೊಡೆದಿದ್ದ ಕಾರಣ,ನಮ್ಮ ಜೊತೆ ಬರುತ್ತಿರಲಿಲ್ಲ,ಹಾಗಾಗಿ ಅವನನ್ನು ಭೇಟಿ ಆಗಲು ಸಾಧ್ಯ ಇರಲಿಲ್ಲ.ಈ ಘಟನೆ ನಡೆದು ೨ ದಿನದ ನಂತರ ನನಗೆ ನನ್ನ ಪರ್ಸ್ ಮತ್ತು ಬಸ್ ಪಾಸನ್ನು ಕೊಟ್ಟ.ಅವಾಗ ನಿಟ್ಟುಸಿರು ಬಿಟ್ಟಂತಾಯಿತು.

 
ಚರಣನಿಗೆ ಅದನ್ನು ಕೊಟ್ಟವನು ಯಾರು ಅಂತ ನನಗೆ ಗೊತ್ತಿಲ್ಲ,ಆದರೆ ಆ ಪುಣ್ಯಾತ್ಮನಿಗೆ ಒಂದು ದೊಡ್ಡ ಥ್ಯಾಂಕ್ಸ್ ಹೇಳಲೇಬೇಕು ನಾನು.ಒಟ್ಟಿನಲ್ಲಿ ನಮಗೆ ಡ್ರೈವರ್ ಕಂಡಕ್ಟರ್ ಗಳು  ಅಣ್ಣ,ಮಾವ,ಅಂಕಲ್ಗಳು ಆಗಿದ್ದರು,ಕೆಲವರನ್ನು ಹೊರತುಪಡಿಸಿ,ಆದ್ದರಿಂದ ನಮಗೆ ಅಷ್ಟು ಚಿಂತೆ ಇರುತ್ತಿರಲಿಲ್ಲ,ಹೇಗೋ ಒಂದು ವಾರ ಈ ರೀತಿ ಓಡಾಡಿ,ಆಮೇಲೆ ಪಾಸು ಸಿಕ್ಕಿದ್ದು ಒಂದು ಕಡೆ ಖುಷಿಯೂ ಆಯಿತು,ಅಪ್ಪನಿಗೆ ಗೊತ್ತಾಗದ  ಹಾಗೆ ಅಮ್ಮನ ಹತ್ತಿರ ದುಡ್ಡು ಇಸಿದು ಕೊಳ್ಳುವುದು ತಪ್ಪಿತು.ಆದರೂ ಅಮ್ಮನ ಪರ್ಸ್ ಇಂದ ಬೇಕಾದಷ್ಟು ಸಲ ದುಡ್ಡು ಕದ್ದಿದ್ದೇನೆ,ಆದರೆ ಅಪ್ಪನ ಜೇಬಿಗೆ ಕೈ ಹಾಕುವ ಧೈರ್ಯ ಇನ್ನೂ ಇಲ್ಲ.
-----------------------------------------------------------------------------------------------------------------
ಇಂಥ ಹಲವಾರು ಘಟನೆಗಳು,ನೆನಪುಗಳು ಯಾವಾಗಲು ನೆನಪಾಗುತ್ತಿರುತ್ತದೆ,ಕೆಲವು ಕಾಡುತ್ತಿರುತ್ತವೆ.ಆ ಕಂಡಕ್ಟರ್ ಗಳು ಊರಿಗೆ ಹೋದಾಗ ಆಗೊಮ್ಮೆ,ಹೀಗೊಮ್ಮೆ ಸಿಗುತ್ತಿದ್ದರು..ಅಂದಿನಂತೆ ಏನೋ ಕೆಂಚ,ಹೆಂಗಿದ್ಯಲ್ಲ ಡುಮ್ಮ,ಏನ್ಲಾ ಗೌಡ ಸಮಾಚಾರ ಅಂತೆಲ್ಲ ಮಾತಾಡಿಸುತ್ತಾರೆ,ನಮ್ಮ ಸ್ನೇಹಿತರ ಬಗ್ಗೆ ಎಲ್ಲ ವಿಚಾರಿಸುತ್ತಾರೆ.ಒಟ್ಟಿಗೆ ಬೈಟು ಟೀ ಕುಡಿದಿದ್ದೇವೆ..ಬಡ್ಡಿ ಮಕ್ಳ ಹಂಗೆ ಮಾಡ್ತಿದ್ರು ನೀವೆಲ್ಲ ಸೇರಿ ಅಂತ ಅವರೇ ನೆನಪಿಸುತ್ತಿದ್ದರು..ಕೆಲವರ ಜೊತೆ ಅಂದು ಇದ್ದ ಭಾಂದವ್ಯ ಈಗಲೂ ಇದೆ.ಈಗ ಕೆಲವರು ಬೇರೆ ಬೇರೆ ಕಡೆಗೆ ವರ್ಗ ಆಗಿದ್ದಾರೆ,ಕೆಲವರು ನಿವೃತ್ತಿ ಆಗಿದ್ದಾರೆ,ಕೆಲವರು ಆಗೊಮ್ಮೆ ಹೆಗೊಮ್ಮೆ ಈಗಲೂ ಸಿಗುತ್ತಾರೆ,ಮತ್ತೆ ಅದೇ ರೀತಿ ಮಾತಾಡುತ್ತೇವೆ.ನೆನಪಿಸಿಕೊಳ್ಳುತ್ತೇವೆ.
 
ಇನ್ನು ಕೆಲವು ನಮ್ಮ ತಲೆ ಹರಟೆ ಘಟನೆಗಳು,ಜಗಳ ಆಡಿದ್ದು ಇಂಥ ಅನೇಕಾನೇಕ ಘಟನೆಗಳು ಇವೆ.ಅವನ್ನು ಇನ್ನೊಮ್ಮೆ ಬರೆಯುತ್ತೇನೆ.ಸಧ್ಯಕ್ಕೆ ಇಷ್ಟು ಸಾಕು ಅನ್ನೋದು ನನ್ನ ಮನವರಿಕೆ.

Tuesday, August 28, 2012

"ಅನುಭಾವ"ದ ಜಾಡು ಹಿಡಿದು ಹೊರಟ ಯುವ ಪಡೆ !!!


ಆರ್ಕುಟ್,ಫೇಸ್ಬುಕ್ ಗಳಂಥ ಸಾಮಾಜಿಕ ತಾಣಗಳನ್ನು ಈಗಿನ ಯುವ ಪೀಳಿಗೆ ಉಪಯೋಗಿಸುವುದು ಸರ್ವೇ ಸಾಮಾನ್ಯ.ಕೆಲವರು ಕೇವಲ ಚಾಟಿಂಗ್ ಮತ್ತು ಇನ್ನಿತರ ಮೋಜಿಗೆ ಇಂಥ ತಾಣಗಳನ್ನು ಉಪಯೋಗಿಸುವುದುಂಟು.ಇನ್ನು ಕೆಲವರಿಗೆ ಹೊಸ ಸ್ನೇಹಿತರು ಸಿಗುತ್ತಾರೆ ಎಂಬ ಬಯಕೆ..ಆದರೆ ಇಲ್ಲೊಂದು ಯುವಕರ ಗುಂಪು ಇಂಥ ಸಾಮಾಜಿಕ ತಾಣದ ಒಂದು ಗುಂಪಿನ ಮುಖೇನ ಪರಿಚಯಗೊಂಡು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ.ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಆಸರೆ ಆಗಿದ್ದಾರೆ..'ಅನುಭಾವ'ದ ಜಾಡು ಹಿಡಿದು ಹೊರಟಿರುವ ಅನುಭವಿಗಳಲ್ಲದ  ಈ ಯುವಕರ ತಂಡದ ಹೆಸರು "ಟೀಂ ಅನುಭಾವ"..ಮೊದಮೊದಲು ಕೇವಲ ಹರಟೆ ಮತ್ತು ಇನ್ನಿತರ ವಿಷಯಗಳಿಗೆ ಸೀಮಿತವಾಗಿದ್ದ ಈ ಗುಂಪು,ನಂತರ ಕೆಲವರ ಸಲಹೆ ಮತ್ತು  ನಿರ್ಧಾರಗಳಿಂದಾಗಿ ಏನಾದರು ಸಮಾಜ ಸೇವೆ ಮಾಡಬೇಕೆಂಬ ಬಯಕೆ ಇಂದ ಈ ತಂಡ ಮೊದಲಿಗೆ ಅಸ್ತಿತ್ವಕ್ಕೆ ಬಂತು..
ಈ ಯುವ ಪಡೆಯ ಪ್ರತಿಯೊಂದು ಮನಸ್ಸಿನಲ್ಲಿ  ಶಿಕ್ಷಣಕ್ಕೆ  ಮೊದಲ  ಆದ್ಯತೆ ಕೊಡಬೇಕೆಂಬ ಹಂಬಲ ಇತ್ತು.ಅಂತ ಸಮಯದಲ್ಲಿ  ಇವರಿಗೆ ಈ ಒಂದು ಸಕಾರ್ಯ ಮಾಡುವುದಕ್ಕೆ ಸಿಕ್ಕಿದ್ದು ಮಾಗಡಿ ತಾಲ್ಲೂಕಿನಲ್ಲಿರುವ ಒಂದು ವಿದ್ಯಾರ್ಥಿ ನಿಲಯ.ಕೆಂಚಗಲ್ ಬಂಡೆ ಮಠದ ವತಿಯಿಂದ ನಡೆಯುತ್ತಿರುವ ಉಚಿತ ವಿದ್ಯಾರ್ಥಿ ನಿಲಯದಲ್ಲಿ ಸುಮಾರು ೧೫೦ ಬಡ ವಿದ್ಯಾರ್ಥಿಗಳಿದ್ದಾರೆ.ಅದರಲ್ಲಿ ಎಷ್ಟೋ ಮಕ್ಕಳ ಪೋಷಕರು ದೂರದ  ಊರುಗಳಿಂದ ಬೆಂಗಳೂರು ಮತ್ತು ಇನ್ನಿತರ ಕಡೆ ಕೆಲಸ ಅರಸಿ ಬಂದು ತಮ್ಮ ಮಕ್ಕಳನ್ನು ಇಲ್ಲಿ ಸೇರಿಸಿದ್ದಾರೆ,ಮತ್ತು ಅವರಲ್ಲಿ ಬಹುತೇಕ ವಿದ್ಯಾರ್ಥಿಗಳು ಬಡತನದಿಂದ ಬಂದವರೇ.ಅಲ್ಲದೆ ಆ ಸಂಸ್ಥೆಗೆ ಕೂಡ ಇಷ್ಟು ಮಕ್ಕಳಿಗೆ ಎಲ್ಲಾ ರೀತಿಯ ಅವಶ್ಯಕತೆಗಳನ್ನು ಪೂರೈಸಬಲ್ಲ ಶಕ್ತಿ ಇರಲಿಲ್ಲ..ಇಂಥ ಸನ್ನಿವೇಶದಲ್ಲಿ ಅಲ್ಲಿನ ಮಕ್ಕಳಿಗೆ ಸಹಾಯಕ್ಕೆ ಬಂದಿದ್ದು ಈ ಯುವ ಪಡೆ.
೪ ವರ್ಷದ ಹಿಂದೆ ಕೇವಲ ಬೆರಳೆಣಿಕೆ ಅಷ್ಟು ಜನರಿಂದ ಶುರುವಾದ ತಂಡ ಈಗ ಸುಮಾರು ೧೦೦-೧೫೦ ಸಕ್ರಿಯ ಸದಸ್ಯರನ್ನು ಹೊಂದಿದೆ.ಈ ಟೀಂನ ವತಿಯಿಂದ ಆ ಹಾಸ್ಟೆಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯ  ಎಲ್ಲಾ ಅವಶ್ಯಗಳನ್ನು ಪೂರೈಸಲಾಗುತ್ತಿದೆ..ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಅವರಿಗೆ ಅಗತ್ಯ ಇರುವ ಪುಸ್ತಕಗಳು,ಸಮವಸ್ತ್ರ  ಮತ್ತು ಸ್ಟೇಷನರಿ ಸಾಮಗ್ರಿಗಳನ್ನು ವಿತರಿಸಲಾಗುತ್ತದೆ.ಅಲ್ಲದೆ ಅವರ ದಿನ ನಿತ್ಯದ ಬಳಕೆಗಳಾದ ಸೋಪು,ಬ್ರಶ್ ಇವುಗಳನ್ನು ಕೂಡ ಒದಗಿಸುತ್ತಾರೆ.ಇಷ್ಟೇ ಅಲ್ಲದೆ ಪ್ರತಿ ರಾಷ್ಟ್ರೀಯ ಹಬ್ಬಗಳಂದು ಆ ವಿದ್ಯಾರ್ಥಿಗಳಿಗೆ ಪಥ್ಯೇತರ  ಚಟುವಟಿಕೆಗಳನ್ನು ಏರ್ಪಡಿಸಿ ಅವರಲ್ಲಿ ಸ್ಪರ್ಧಾ  ಮನೋಭಾವನೆಯನ್ನು ಬೆಳೆಸುತ್ತಾರೆ.ಪ್ರತಿ ವರ್ಷ ಆರೋಗ್ಯ ಶಿಬಿರವನ್ನು ಕೂಡ ಏರ್ಪಡಿಸಿ ಮಕ್ಕಳ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸುತ್ತಾರೆ..ವಾರ್ಷಿಕ ಕ್ರೀಡಾಕೂಟ ಕೂಟವನ್ನು ಕೂಡ ೪ ವರ್ಷದಿಂದ ಈ ತಂಡ ಆಯೋಜಿಸುತ್ತ ಬಂದಿದೆ...ಅಲ್ಲಿನ ವಿದ್ಯಾರ್ಥಿಗಳಿಗೆ  ಅನುಕೂಲವಾಗುವಂತೆ ಮತ್ತು ಮಕ್ಕಳಲ್ಲಿ ಕಂಪ್ಯೂಟರ್ ಜ್ಞಾನ ಬೆಳೆಸಲು ವಿದ್ಯಾರ್ಥಿ ನಿಲಯದಲ್ಲಿ ಸುಮಾರು ೮ ಕಂಪ್ಯೂಟರ್ಗಳನ್ನು ಒದಗಿಸಿ ಒಂದು ಲ್ಯಾಬ್ ಅನ್ನು ಕೂಡ ಸ್ವತಃ ಮಾಡಿದ್ದಾರೆ,ಅಲ್ಲದೆ ಅದರ ನಿರ್ವಹಣೆ  ಕೂಡ ಈ  ತಂಡದ್ದೆ .ಅಲ್ಲದೆ ನಾನಾ ರೀತಿಯ ೫೦೦ ಕ್ಕೂ ಹೆಚ್ಚು ಪುಸ್ತಕಗಳನ್ನು ನೀಡಿ ಗ್ರಂಥಾಲಯವನ್ನು ಕೂಡ ಮಾಡಿ ಮಕ್ಕಳ ಜ್ಞಾನಾರ್ಜನೆಗೆ ಸಹಾಯವಾಗುವಂತೆ ಮಾಡಿದ್ದಾರೆ.ಇದರಲ್ಲಿ ವ್ಯಕ್ತಿತ್ವ ವಿಕಸನ,ಆಧ್ಯಾತ್ಮಿಕ ಅಲ್ಲದೆ ವ್ಯಾಕರಣ ಹೀಗೆ ಅವರ ಶೈಕ್ಷಣಿಕ ವಿಷಯಕ್ಕೆ ಸಂಭಂದ ಪಟ್ಟ ಪುಸ್ತಕಗಳು ಈ ಸಂಗ್ರಹದಲ್ಲಿವೆ.

ಅಷ್ಟೇ ಅಲ್ಲದೆ ಹತ್ತನೇ ತರಗತಿ ಮತ್ತು ಪಿಯುಸಿ ಮಕ್ಕಳಿಗೆ ಅವರ ಮುಂದಿನ ವೃತ್ತಿ ಶಿಕ್ಷಣ ಮಾರ್ಗದರ್ಶನ  ನೀಡಲು ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಗುತ್ತದೆ.ಅವರ ಪರೀಕ್ಷೆಗಳಿಗೆ ಮುಂಚೆ ಪರೀಕ್ಷೆಯ ಪೂರ್ವ ತಯಾರಿಯ ಬಗ್ಗೆ ಗಮನ ಹರಸಿ ಅದಕ್ಕೆ ಬೇಕಾದ ತರಬೇತಿಗಳನ್ನು  ಕೂಡ ಸ್ವತಃ ಈ ತಂಡದ ಸದಸ್ಯರೇ ಕೊಡುತ್ತಾರೆ.ಈ ತರಬೇತಿಯ ನಂತರ ಮಕ್ಕಳಲ್ಲಿ ಆತ್ಮ ವಿಶ್ವಾಸ ಗರಿಗೆದರುತ್ತದೆ ಮತ್ತು ಮಕ್ಕಳೇ ಹೇಳುವಂತೆ ಬೇರೆಯವರ ಜೊತೆ ನಮ್ಮನ್ನು ಸ್ಪರ್ಧೆಗೆ ಒಡ್ಡುವಂತೆ ನಮ್ಮಲ್ಲಿ ಆತ್ಮ ಸ್ಥೈರ್ಯ ತುಂಬುತ್ತಾರೆ ಅಲ್ಲದೆ ನಮ್ಮ ಮುಂದಿನ ಶಿಕ್ಷಣದ ಆಯ್ಕೆಯಲ್ಲಿ ಕೂಡ ಸಹಕಾರಿ ಆಗುತ್ತಾರೆ ಎಂದು ಹೇಳುತ್ತಾರೆ.ವಿದ್ಯಾರ್ಥಿಗಳಲ್ಲಿ ಒಂದು ಸ್ಪರ್ಧಾ ಮನೋಭಾವ ಉಂಟಾಗಿದೆ.

ಅಂತರ್ಜಾಲದ ಮೂಲಕ ಪರಿಚಯ ಆಗಿ ಮೊದಲು ಸಣ್ಣದಾಗಿ ಸೇವೆ ಆರಂಭಿಸಿದಾಗ ಅವರುಗಳು ಅಷ್ಟೇ ತಮ್ಮ ಸ್ವಂತ ಹಣದಲ್ಲಿ ಮಕ್ಕಳಿಗೆ ಏನಾದರು ಅನುಕೂಲ ಮಾಡಿಕೊಡುತ್ತಿದ್ದರು.ನಂತರ ಸ್ನೇಹಿತರಿಂದ ಸ್ನೇಹಿತರಿಗೆ ಹರಡಿ,ಅಂತರ್ಜಾಲದ ಮೂಲಕ ಕೂಡ ಒಬ್ಬರಿಂದ ಒಬ್ಬರಿಗೆ ತಿಳಿದು,ಅಲ್ಲಿ ಸೇವೆ ಮಾಡಲು  ಸ್ವಯಂ ಸೇವಕರು ಕೂಡ ದಿನೇ ದಿನೇ ಹೆಚ್ಚಾದರು ಅಲ್ಲದೆ ಎಲ್ಲರೂ ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡಲು ಮುಂದಾದರು.ಹೀಗೆ ಚಿಕ್ಕದಾಗಿ ಶುರು ಆದ ಇವರ ಸೇವೆ ಇಂದು ಅಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಅಗತ್ಯ ಪೂರೈಸಬಲ್ಲಷ್ಟು ಬೆಳೆದಿದೆ.ಈ ತಂಡದಲ್ಲಿ ನಾನ ವೃತ್ತಿಯ ಯುವಕ ಯುವತಿಯರು ಇದ್ದಾರೆ,ಅಲ್ಲದೆ ಸ್ವತಃ ವಿದ್ಯಾರ್ಥಿಗಳು ಕೂಡ ಇದ್ದಾರೆ.
ಹೀಗೆ ಒಬ್ಬರಿಂದ ಒಬ್ಬರಿಗೆ ತಿಳಿದು ಈ ತಂಡ ಇನ್ನು ಬೆಳೆಯುತ್ತಲೇ ಇದೆ,ಇಲ್ಲಿ ಎಲ್ಲರೂ ಆತ್ಮ ಸಾಕ್ಷಿಯಾಗಿ ತಮ್ಮ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ,ಪ್ರತಿಯೊಬ್ಬರಲ್ಲೂ ಈ ಮಕ್ಕಳಿಗೆ ಒಂದು ಒಳ್ಳೆಯ ಜೀವನ ಕಲ್ಪಿಸಬೇಕೆಂಬ ಮಹದಾಸೆ ಇದೆ.ಎಲ್ಲರಲ್ಲೂ ಒಂದು ಅರ್ಪಣಾ ಮನೋಭಾವ ಇದೆ.ಮೊದಲು ತಂಡದ ಸದಸ್ಯರಾಗಿದ್ದು ಈಗ ಉದ್ಯೋಗ ನಿಮಿತ್ತ ಹೊರ ರಾಜ್ಯ,ಹೊರ ದೇಶದಲ್ಲಿ ಕೂಡ ನೆಲೆಸಿರುವ ಕೆಲವರು ಧನ ಸಹಾಯ ಮಾಡುತ್ತಿದ್ದಾರೆ.ಪ್ರತಿಯೊಬ್ಬ ಸದಸ್ಯ ಕೂಡ ತನ್ನ ಕೈಲಾದಷ್ಟು ಹಣ ನೀಡುತ್ತಾರೆ ಮತ್ತು ಇವರು ಬೇರೆ ಯಾರನ್ನು ಕೂಡ ಅಂಗಲಾಚಿಲ್ಲ..ಎಲ್ಲರೂ ಸ್ವ ಮನಸ್ಸಿನಿಂದ ಸೇರಿಕೊಂಡವರು ಮತ್ತು ಆ ಬಡ ಮಕ್ಕಳಿಗೆ ಆಸರೆ ಆಗಬೇಕು ಅಂಬ ಧೃಡ ನಿರ್ಧಾರ ಹೊಂದಿದವರು..ಇವರಲ್ಲಿ ಪ್ರತಿಯೊಬ್ಬರೂ ನಾಯಕರೇ....

ಆ ಅನುಭಾವಿಗಳು ಹೇಳುವಂತೆ ತಮ್ಮನ್ನು ತಮ್ಮ ತಮ್ಮ ಪೋಷಕರು ಚೆನ್ನಾಗಿ ಸಾಕಿ ಈಗ ಒಂದು ಒಳ್ಳೆಯ ದುಡಿಮೆಯ ಹಂತದಲ್ಲಿದ್ದೇವೆ,ಇಂಥ ಬಡ ಮಕ್ಕಳ ಜೀವನ ಕೂಡ ಒಂದು ಸುಗಮವಾದ ಹಾದಿಯಲ್ಲಿ ಹೋಗಬೇಕೆಂದರೆ ಇವರಿಗೆ ಧನ ಸಹಾಯ ಆಗಿರಬಹುದು ಅಥವಾ ಧೈರ್ಯ ತುಂಬುವ ಮನಸ್ಸಿನ ಅವಶ್ಯಕತೆ ಇದೆ.ಅವರನ್ನು ಓದಿಸುವ ಶಕ್ತಿ ಎಷ್ಟೋ ಜನ ಪೋಷಕರಿಗೆ ಇಲ್ಲ,ಆದ್ದರಿಂದ ನಮ್ಮಿಂದ ಅವರಿಗೆ ಸಹಾಯಕಾರಿ ಆಗುವಂತೆ ಈ ಕಾರ್ಯವನ್ನು ಶುರು ಮಾಡಿದೆವು,ಈಗ ಅಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ನಾವು ಪೂರೈಸುತ್ತಿದ್ದೇವೆ ಎಂದು ಹೇಳಿದರು.ಈ ಅನುಭಾವಿಗಳಲ್ಲಿ ಕಾಣುವ ಮಂದಹಾಸವೇ ಅವರ ಸಂಕಲ್ಪಕ್ಕೆ ಸಾಕ್ಷಿ..ಇವರ ಸಹಾಯದಿಂದ ಆ ಮಕ್ಕಳಲ್ಲಿ ಆತ್ಮ ವಿಶ್ವಾಸ ಇನ್ನಿಲ್ಲದಷ್ಟು ಹೆಚ್ಚುತ್ತಿದೆ.ಕೇವಲ ಈ ವಿದ್ಯಾರ್ಥಿ ನಿಲಯಕ್ಕೆ ಸೀಮಿತವಾಗದೆ ಬೇರೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡ ಇವರು ಸಹಾಯ ಮಾಡಿದ್ದಾರೆ.ಅಥಣಿ ಮೂಲದ ಒಬ್ಬ ಬಾಲಕಿಗೆ ಆಕೆಯ ಡಿಪ್ಲೋಮಾ ಶಿಕ್ಷಣಕ್ಕೆ ನೆರವಾಗಿ ಪೂರ್ತಿ ಶುಲ್ಕ ಮತ್ತು ಅವಶ್ಯಕ ಪುಸ್ತಕಗಳಿನ್ನು ಒದಗಿಸಿ ಕೊಟ್ಟಿದ್ದಾರೆ....

ಆ ಹಾಸ್ಟೆಲ್ಲಿನ ಮೇಲ್ವಿಚಾರಕರು ಹೇಳುವಂತೆ ಈ ತಂಡದ ಸಹಾಯದಿಂದಾಗಿ ವಿದ್ಯಾರ್ಥಿಗಳ ಎಷ್ಟೋ ಕೊರತೆಗಳು ನೀಗಿವೆ ಮತ್ತು ಅವರಲ್ಲಿ ತಾವು ಕೂಡ ಮುಂದೊಂದು ದಿನ ಇದೆ ರೀತಿ ಸೇವೆ ಮಾಡಬೇಕೆಂಬ ಆಶಯ ಇದೆ ಎಂದು.ಆ ಮಕ್ಕಳು ಕೂಡ ಈ ತಂಡದ ಬಗ್ಗೆ ಬಹಳ ಕೃತಜ್ಞತಾಪೂರ್ವವಾಗಿ ಇವರಿಂದ ಆಗುತ್ತಿರುವ ಸಹಾಯದ ಬಗ್ಗೆ ಹೇಳಿದರು...

ಈ ಶೈಕ್ಷಣಿಕ ವರ್ಷದ ಶುರುವಿನಲ್ಲಿ,ಯಾ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಅನುಕೂಲವಾಗುವಂತೆ ಅಲ್ಲಿ ಒಂದು ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್ ಅನ್ನು ಕೂಡ ಅಳವಡಿಸಲಾಯಿತು,ಅಲ್ಲದೆ ಒಬ್ಬರು ಶಿಕ್ಷಕರನ್ನು ಕೂಡ ನೇಮಿಸಲಾಗಿದೆ...

ಇತ್ತೀಚೆಗೆ, ಈ ಸ್ವತಂತ್ರ ದಿನದಂದು ಈ ತಂಡದಿಂದ ವಿದ್ಯಾರ್ಥಿ ನಿಲಯ ಮತ್ತು ಅಲ್ಲಿನ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ,ಆರೋಗ್ಯ ತಪಾಸನೆ ಶಿಬಿರವನ್ನು ಏರ್ಪಡಿಸಲಾಗಿತ್ತು.ಸುಮಾರು ೨೫೦-೩೦೦ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು.ಅಲ್ಲದೆ ಕೆಲವು ವಿದ್ಯಾರ್ಥಿಗಳ ಹೆಚ್ಚಿನ ಚಿಕಿತ್ಸೆಯನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊಡಿಸಲಾಯಿತು.

ಆರೋಗ್ಯ ತಪಾಸಣೆ ಶಿಬಿರದ ಕೆಲವು ಫೋಟೋಗಳು:






                                                               



ಶಿಬಿರದಲ್ಲಿ ಪಾಲ್ಗೊಂಡಿದ್ದ ವೈದ್ಯರ ತಂಡ ಮತ್ತು ಅನುಭಾವ ಟೀಂನ ಸದಸ್ಯರು....


More Inforamtion:Anubhaava in Facebook

 http://www.anubhaava.org/

ಅವಧಿಯಲ್ಲಿ ಪ್ರಕಟಗೊಂಡಿದೆ..........
 
ಫೋಟೋಗಳು :ಶಿವ ಪುರೋಹಿತ್ ,ಕೀರ್ತೇಶ್.ಜಿ .ಆರ್ ಮತ್ತು ಗಿರೀಶ್.ಎಸ್

Monday, July 23, 2012

ಹುಯ್ಯೋ ಹುಯ್ಯೋ ಮಳೆರಾಯ.....

ಮುನಿದಿಹಳು ಕ್ಷಮಯಾಧರಿತ್ರಿ,
ಒಡಲೊಡೆದು ಕಾದಿಹಳು ನಿನಗೆ,
ತಲ್ಲಣಿಸು ಬಾ ಅವಳನು ... ಓ ಮಳೆರಾಯ !!

ಕೆರೆ ಕಟ್ಟೆಗಳು ಒಣಗಿಹುದು,
ಪಕ್ಷಿ ಸಂಕುಲವು ಕಂಗೆಟ್ಟಿಹುದು ,
ದಯೆ ತೋರು ಅವುಗಳ ಜೀವಕೆ ... ಓ ಮಳೆರಾಯ !!

ಬೆಳೆ ಇಲ್ಲ,ದವಸ ಇಲ್ಲ,
ಚಿಂತಾಕ್ರಾಂತನಾಗಿಹನು ರೈತ,
ಕೃಪೆ ತೋರು ಅವನ ಮೇಲೆ... ಓ ಮಳೆರಾಯ !!

ನಿನ್ನನೇ ನೆಚ್ಚಿಹವು ಅದೆಷ್ಟೋ ಜೀವಗಳು....

Wednesday, June 27, 2012

"ಪುಸ್ತಕ ಮನೆ" ಎಂಬ ವಿಸ್ಮಯ ಲೋಕದ ಸುತ್ತ !!!!



ಕಳೆದ ವಾರ ಒಂದಿಷ್ಟು ಜನ ಬ್ಲಾಗಿಗರೆಲ್ಲರೂ ಸೇರಿ "ಪುಸ್ತಕ ಮನೆ" ಎಂಬ ವಿಶಿಷ್ಟ,ವಿಸ್ಮಯ ಲೋಕಕ್ಕೆ ಹೋಗಿದ್ದೆವು.ಅದೊಂದು ಪುಸ್ತಕದ ಸಾಗರ,ಅಲ್ಲಿ ಯಾವ ವಿಷಯಕ್ಕೆ ಸಂಬಂಧಿಸಿದ ಪುಸ್ತಕ ಬೇಕಾದರೂ ಸಿಗುತ್ತದೆ,ಅದು ಕೇವಲ ಒಬ್ಬ ವ್ಯಕ್ತಿ ತನ್ನ ಜೀವಮಾನವಿಡಿ ದುಡಿದ ದುಡ್ಡಿನಿಂದ ಕೊಂಡ ಪುಸ್ತಕಗಳು.ನಿಸ್ವಾರ್ಥತೆಯಿಂದ ತನ್ನ ಜೀವನವನ್ನು ಕೇವಲ ಪುಸ್ತಕ ಸಂಗ್ರಹಕ್ಕಾಗಿ ಯೋಜಿಸಿ ಕೂಡಿಟ್ಟ ಪುಸ್ತಕಗಳು.ಇಂಥ ಒಂದು ಸರಸ್ವತಿ ಲೋಕದ ನಿರ್ಮಾತೃ,ಶ್ರೀಯುತ ಅಂಕೇಗೌಡರು.
ಪುಸ್ತಕ ಮನೆಗೆ ಭೇಟಿ ಕೊಡುವ ಮೊದಲು ಅವರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ,ತಮ್ಮ ಶಿಕ್ಷಣದ ನಂತರ ಕೆಲ ಸಮಯ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿ,ನಂತರ ಮೈಸೂರಿನಲ್ಲಿ ಡಿಗ್ರಿ ಮುಗಿಸಿ ಓದಿನ ನಂತರ ಪಾಂಡವಪುರ ಸಕ್ಕರೆ ಕಾರ್ಖಾನೆ ಯಲ್ಲಿ ಟೈಮ್ ಆಫಿಸರ್ ಆಗಿ ಕೆಲಸಕ್ಕೆ ಸೇರಿ ಕೊಂಡರು.ತಮ್ಮ ಗುರುಗಳಾದ ಕೆ.ಅನಂತರಾಮು ಅನ್ನುವವರು "ಮನುಷ್ಯನಿಗೆ ಒಳ್ಳೆಯ ಹವ್ಯಾಸಕ್ಕಿಂತ ಮೌಲ್ಯಯುತವಾದ ಗುಣ ಯಾವುದು ಇಲ್ಲ,ಪುಸ್ತಕಗಳನ್ನು ಸಂಗ್ರಹಿಸು,ಬಡವರಿಗೆ ಸಹಾಯ ಆಗಬಹುದು" ಎಂದಿದ್ದರಂತೆ,ಅದನ್ನೇ ತಲೆಯಲ್ಲಿಟ್ಟುಕೊಂಡು ಮುಂದೆ ಸಂಗ್ರಹ ಕಾರ್ಯಕ್ಕೆ ನಾಂದಿ ಹಾಡಿದರು.ಅದರ ಪ್ರತಿಫಲವೇ ಇಂದು ನಮ್ಮೆದುರಿಗೆ ಕಂಡ ರಾಶಿ ರಾಶಿ ಪುಸ್ತಕ.
ಅವರ ಕೆಲಸದಲ್ಲಿದ್ದಾಗ ತಮ್ಮ ಕ್ವಾಟ್ರಸ್ ತುಂಬಾ ಬರಿ ಪುಸ್ತಕಗಳೇ ಇದ್ದವಂತೆ,ಮಧ್ಯದಲ್ಲಿ ಒಬ್ಬರಿಗೆ ಓಡಾಡಲು ಜಾಗ ಬಿಟ್ಟರೆ,ಇನ್ನೆಲ್ಲ ಜಾಗ ಪುಸ್ತಕಗಳಿಂದ ತುಂಬಿತ್ತು,ನಂತರ ಆ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದು ಬಂದ ಪಿ.ಎಫ್ ಹಣ,ಅಲ್ಲದೆ ತಮ್ಮ ಗದ್ದೆಯಲ್ಲಿ ಬೆಳೆದಿದ್ದ ಕಬ್ಬು ಮಾರಿ ಬಂದ ಹಣ,ಎಲ್.ಐ.ಸಿ ಏಜೆಂಟ್ ಆಗಿ ದುಡಿದಿದ್ದ ಹಣ,ಅದೂ ಸಾಲದೆ ಮೈಸೂರಿನಲ್ಲಿದ್ದ ತಮ್ಮ ನಿವೇಶನವನ್ನು ಕೂಡ ಮಾರಿ ಅದರಿಂದ ಬಂದ ಹಣವನ್ನು ಪುಸ್ತಕ ಸಂಗ್ರಹಕ್ಕಾಗಿ ಬಳಸಿದ್ದಾರೆ.ಒಂದು ಸಮಯದಲ್ಲಿ ಆ ಪುಸ್ತಕಗಳನ್ನು ಸರಿಯಾಗಿ ಜೋಡಿಸುವ ಕಾರ್ಯ ಆಗಲಿ,ಅವುಗಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳುವುದೇ ಅಂದು ಜವಾಬ್ದಾರಿ ಕೆಲಸ ವಾಗಿತ್ತು,ಆ ಸಮಯದಲ್ಲಿ ಅವರ ಆಪ್ತ ಸ್ನೇಹಿತರೆಲ್ಲರೂ ಸೇರಿ ಒಂದು ಯೋಜನೆ ರೂಪಿಸಲು ನಿರ್ಧರಿಸಿದ್ದರು.ಅದೇ ಸಮಯದಲ್ಲಿ ಕೆ.ಅರ್.ಎಸ್ ನ ಹಿನ್ನೀರಿನಲ್ಲಿ  ಮುಳುಗಿ ಹೋಗಿದ್ದ ವೇಣು ಗೋಪಾಲ ಸ್ವಾಮೀ ದೇವಸ್ಥಾನವನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿತ್ತು,ಅದನ್ನು ಖ್ಯಾತ ಉದ್ಯಮಿ  ಶ್ರೀ ಹರಿ ಖೋಡೆಯವರು ನಿಭಾಯಿಸುತ್ತಿದ್ದರು,ಆ ಸಮಯದಲ್ಲಿ ಈ ಪುಸ್ತಕ ಸಂಗ್ರಹಣೆಯ ಮತ್ತು ಅವುಗಳಿಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದನ್ನು   ಸ್ಥಳೀಯರಿಂದ ಮನಗಂಡ ಖೋಡೆಯವರು ಅಂಕೇಗೌಡರ ಸಹಾಯಕ್ಕೆ ಬಂದರು.

ಈ ಪುಸ್ತಕ ಸಂಗ್ರಹಣೆಗೆ ಮನಸೋತ ಖೋಡೆಯವರು ಅಂಕೇಗೌಡರಿಗೆ ಹಣ ಸಹಾಯ ಮಾಡಲು ಮುಂದೆ ಬಂದಾಗ ಅವರು ತಮಗೆ ಹಣಕ್ಕಿಂತ ಈ ಪುಸ್ತಕಗಳಿಗೆ ಒಂದು ಸರಿಯಾದ ವ್ಯವಸ್ಥೆ ಮಾಡಿಕೊಟ್ಟರೆ ಸಾಕು ಎಂದಾಗ ಖೋಡೆಯವರು ಒಬ್ಬ ಇಂಜಿನಯರ್ ಮತ್ತು ಅವರೊಂದಿಗೆ ನಲವತ್ತು ಜನ ಸಹಾಯಕರನ್ನು ಆ ಪುಸ್ತಕಗಳ ವಿಂಗಡಣೆ ಮಾಡಲು ಕಳುಹಿಸಿಕೊಟ್ಟರು,ನಂತರ ಆ ಗ್ರಾಮದಲ್ಲಿ ಒಂದು ಹಳೆಯ ಟೆಂಟ್ ಅನ್ನು ಕೊಂಡು ಅದನ್ನು ಅಂಕೇಗೌಡ ಜ್ಞಾನ ಪ್ರತಿಷ್ಠಾನದ ಹೆಸರಿಗೆ ನೊಂದಾಯಿಸಿ ಕೊಟ್ಟಿದ್ದಾರೆ.ಆ ಸಮಯದಲ್ಲಿ ಸುತ್ತಮುತ್ತಲಿನ ಹಳ್ಳಿಯ ಜನ ನಾ ಮುಂದು ತಾ ಮುಂದು ಅನ್ನುವ ಹಾಗೆ ಆ ವಿಂಗಡಣೆ ಕಾರ್ಯ ನಡೆಯುವಾಗ ಆ ಕೆಲಸದವರಿಗೆ ಪ್ರತಿ ದಿನ ಊಟ ತಿಂಡಿಯ ವ್ಯವಸ್ಥೆ ಮಾಡಿ ಕೊಟ್ಟಿದ್ದನ್ನು ಶ್ರೀಯುತರು ಸ್ಮರಿಸಿದರು.ಅಲ್ಲದೆ ಅವರ ಕೆಲವು ಆಪ್ತ ಸ್ನೇಹಿತರು ಕೂಡ ಅವರಿಗೆ ತುಂಬಾ ಸಹಾಯ ಮಾಡಿದ್ದಾರೆ ಎಂದು ಕೂಡ ಹೇಳಿದರು.
ಯಾವ ಸಂಸ್ಥೆಯಲ್ಲಿ ಇಲ್ಲದ ಪುಸ್ತಕಗಳು ಕೂಡ ಇಲ್ಲಿ ಸಿಗುತ್ತವೆ,ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಇಲ್ಲಿಗೆ ತಮ್ಮ ಅಧ್ಯಯನಕ್ಕೆ ಅವಶ್ಯ ಇರುವ ಹೆಚ್ಚಿನ ಪುಸ್ತಕಗಳನ್ನು ಹರಸಿ ಇಲ್ಲಿಗೆ ಬರುತ್ತಾರೆ.ಇಲ್ಲಿ ಜೈನ ಸಾಹಿತ್ಯ,ಶರಣ ಸಾಹಿತ್ಯ,ದಾಸ ಸಾಹಿತ್ಯ,ಪುರಾಣ,ಹಳ ಗನ್ನಡ ಕೃತಿಗಳು,ಕಥಾ ಸಂಕಲನಗು,ಕಾವ್ಯ ಸಂಕಲನಗಳು,ಕಾದಂಬರಿ,ಪ್ರಭಂದ,ಆತ್ಮ ಚರಿತ್ರೆ,ನಾಟಕಗಳು,ಇನ್ನು ಯಾವ್ಯಾವ ಸಾಹಿತ್ಯ ಪ್ರಕಾರಗಳು ಇವೆಯೋ ಅವೆಲ್ಲವೂ ಕೂಡ ಇಲ್ಲಿ ಸಿಗುತ್ತದೆ,ಅಲ್ಲದೆ ದೇಶ ವಿದೇಶದ ನಾಣ್ಯಗಳು,ಹಳೆ ಕಾಲದ ಲಗ್ನ ಪತ್ರಿಕೆಗಳು ,ಅದಕ್ಕಿಂತ ಮಿಗಿಲಾಗಿ ಭಾರತದ ರಾಜ ಮಹಾರಾಜರುಗಳ ಫೋಟೋಗಳು ಸಿಗುತ್ತವೆ...

.ಅಲ್ಲದೆ  ಶತಮಾನಗಳಷ್ಟು  ಹಳೆಯ   ಪುಸ್ತಕಗಳು ಇಲ್ಲಿ ಸಿಗುತ್ತವೆ.ಅದೆಲ್ಲದಕ್ಕಿಂತ ನಮಗೆ ಒಂದು ಆಶ್ಚರ್ಯ ಕಾದಿತ್ತು.ಇದುವರೆಗೆ ಕನ್ನಡದಲ್ಲಿ ಕಿಟ್ಟೆಲ್ ನ ಶಬ್ದಕೊಶವೇ ಮೊದಲನೆಯದು ಎಂದು ಭಾವಿಸಿದ್ದ ನಮಗೆ ಅಲ್ಲಿ ಒಂದು ಸತ್ಯ ಗೋಚರವಾಯಿತು.ಕಿಟ್ಟೆಲ್ ನ ಶಬ್ದಕೊಶ ಬಂದಿದ್ದು ೧೮೯೪ರಲ್ಲಿ,ಅದಕ್ಕಿಂತ ಮುಂಚೆಯೇ ಇದ್ದ ಶಬ್ದಕೋಶ ಅಂದರೆ " A Dictionary-Carnese and English" by Rev W.Reeve ಎಂಬುದು...ಅಲ್ಲಿ ಇದ್ದಿದ್ದು ಇದರ ಪರಿಷ್ಕೃತ ಆವೃತ್ತಿ "Revised,enlarged and corrected by Daniel Sanderson"..Daniel Sanderson ಎಂಬಾತ ಆ ಶಬ್ದಕೋಶವನ್ನು ೧೮೫೮ರಲ್ಲಿ ಪರಿಷ್ಕರಿಸಿದ್ದಾನೆ,ಅಂದರೆ ೧೮೫೮ಕ್ಕಿನ್ತ ಹಳೆಯದು ಎಂಬುದು.ಅಲ್ಲದೆ ಇದು ಸುಮಾರು ೧೦೦೦ ಪುಟಗಳಿಷ್ಟಿದೆ.
೧೮೫೮ರಲ್ಲಿ ಪ್ರಕಟಗೊಂಡಿರುವ ಶಬ್ದಕೋಶ 
ಇಷ್ಟೇ ಅಲ್ಲದೆ ಅಲ್ಲಿ  ಕೇವಲ ಕನಡದ ಪುಸ್ತಕಗಳು ಮಾತ್ರ ಸಿಗುವುದಿಲ್ಲ,ಬದಲಾಗಿ ತಮಿಳು,ತೆಲುಗು,ಕೊಡವ,ಉರ್ದು,ಮಲಯಾಳಂ,ಆಂಗ್ಲ,ಫ್ರೆಂಚ್,ಜಪಾನಿ,ಚೀನಿ ಪುಸ್ತಕಗಳು ಸಿಗುತ್ತವೆ,ಅಲ್ಲದೆ ಜಗತ್ತಿನ ಶ್ರೇಷ್ಠ ಕೃತಿಗಳು ಇಲ್ಲಿ ಲಭ್ಯ, ಶೇಕ್ಸ್ಪಿಯರ್ ನ ಕೃತಿಗಳು,ವರ್ಡ್ ವರ್ತ್,ಸಿಡ್ನಿ  ಶೆಲ್ದೊನ್ ನ ಕಾದಂಬರಿಗಳು ಸಿಗುತ್ತವೆ.ವೈಜ್ಞಾನಿಕ,ಭೌಗೋಳಿಕ,ಇತಿಹಾಸ,ವಾಸ್ತು ಶಿಲ್ಪಿ,ಶಿಲ್ಪಕಲೆ,ಇನ್ನು ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ..ಹಾಗೆ ಅಲ್ಲಿ ಸಿಗದ ವಿಷಯ ಇಲ್ಲ.." You give the topic,he will get you the book" ಎಂಬುದು ಆ ಪುಸ್ತಕ ಮನೆಯ ಸೂತ್ರ....

ಇಷ್ಟೇ ಅಲ್ಲದೆ ಮೈಸೂರು  ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ವಿಧ್ಯಾರ್ಥಿ ಒಬ್ಬರು ಇವರ ಬಗ್ಗೆ ಪ್ರಭಂದವನ್ನು ಮಂಡಿಸಿದ್ದಾರೆ.ಒಂದು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪದವಿಗೆ ಇವರು ವಿಷಯ ಆಗಿದ್ದಾರೆ ಅಂದರೆ ಅದಕ್ಕಿಂತ ಹಿರಿಮೆ,ಸಾರ್ಥಕತೆ ಬೇಕೇ?

ಈ ಪುಸ್ತಕ ಮನೆಯಿಂದ ಸುತ್ತಮುತ್ತಲ ಬಡ ವಿದ್ಯಾರ್ಥಿಗಳಿಗೆ,ಅಲ್ಲದೆ ಮೈಸೂರು,ಮಂಡ್ಯದಿಂದ ಕೂಡ ಪದವಿ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅನುಕೂಲವಾಗಿದೆ.ಇದೆಲ್ಲದರ ಹಿಂದೆ ಅವರ ಅವಿರತ ಪರಿಶ್ರಮ ಇದೆ,ಅದಕ್ಕಿಂತ ಮಿಗಿಲಾಗಿ ಆ ಒಂದು ದೃಷ್ಟಿಕೋನ ಅವರಲ್ಲಿದೆ.ಇಲ್ಲಿ ಅಂಕೇಗೌಡ ರನ್ನು ಮತ್ತು ಅವರ ಕಾಯಕವನ್ನು ಮೆಚ್ಚುವುದಕ್ಕಿಂತ ಹೆಚ್ಚಾಗಿ ಅವರ ಶ್ರೀಮತಿಯವರಾದ ಜಯಲಕ್ಷ್ಮಿ ಅವರಿಗೆ ಕೂಡ ಕೋಟಿ ಪ್ರಣಾಮಗಳನ್ನು ಸಲ್ಲಿಸಬೇಕು,ಈ ಒಂದು ಕೆಲಸದ ಹಿಂದೆ ಅವರ ಪರಿಶ್ರಮ ಮತ್ತು ಅವರ ಸೇವೆ ಕೂಡ ಮಿಗಿಲಾದದ್ದು.ಈ ಒಂದು ಗ್ರಂಥಾಲಯದ ಹಿಂದೆ ಅವರು ಪಟ್ಟಿದ್ದು ಶ್ರಮ ಮಾತ್ರ ಅಲ್ಲ,ನೋವು,ಅವಮಾನವನ್ನು ಕೂಡ ಸಹಿಸಿಕೊಂಡಿದ್ದಾರೆ.ಕೆಲವರು ಇವರನ್ನು "ಹುಚ್ಚರಂತೆ ಏನೇನೋ ಮಾಡ್ತಾರೆ" ಎಂದು ಕೂಡ ನಿಂದಿಸಿದ್ದಾರೆ,ಎಂದು ತಮ್ಮ ಹಳೆಯ ನೆನಪುಗಳನ್ನು ಹೇಳಿಕೊಂಡರು.

ಅಲ್ಲಿಗೆ ಭೇಟಿ ಕೊಡುವ ಪ್ರತಿಯೊಬ್ಬರನ್ನು ಕೂಡ ಬಹಳ ವಿನಮ್ರತೆಯಿಂದ ,ಸೌಜನ್ಯದಿಂದ ಮಾತಾಡಿಸುತ್ತಾರೆ,ಸತ್ಕರಿಸುತ್ತಾರೆ.ಅದು ಅವರ ದೊಡ್ಡ ಗುಣ...


ಅಲ್ಲಿನ ಕೆಲವು ಪುಸ್ತಕಗಳತ್ತ ಒಂದು ಕಣ್ಣು ಹಾಯಿಸೋಣ..







ಎಂಥಾ ಸೌಜನ್ಯ..

ಅವರ್ರ ಸಾಧನೆಗೆ ದೊರೆತ ಪ್ರತಿಫಲ...ಇನ್ನು ಸಾಕಷ್ಟು ಪ್ರಶಸ್ತಿ ಪತ್ರಗಳು ಅಲ್ಲಲ್ಲಿ ಇದ್ದವು.


ಭಾರತದ ಎಷ್ಟೋ ರಾಜರುಗಳ ಫೋಟೋಗಳು ಇಲ್ಲಿ ಸಿಗುತ್ತವೆ






ಗ್ರಂಥಾಲಯದ ಒಳ ನೋಟ
50 Wonders of teh World ಎಂಬ ಪುಸ್ತಕವನ್ನು ತೋರಿಸುತ್ತಿದ್ದಾರೆ..


ಇಷ್ಟೆಲ್ಲಾ ಸಂಗ್ರಹಣೆಗೆ ಸಾಥ್ ನೀಡಿದ ಅವರ ಪತ್ನಿಯೊಂದಿಗೆ ಅಂಕೇಗೌಡರು

ಅವರ ಆಪ್ತ ಸ್ನೇಹಿತರು..


ಮಹಾಯುದ್ಧಕ್ಕೆ ಸಂಭದಿಸಿದ್ದು


Encyclopedia
ಎಲ್ಲೆಲ್ಲೂ ಪುಸ್ತಕದ ರಾಶಿ

ಸುಧಾ ಪತ್ರಿಕೆಯ ಮೊದಲ ಸಂಚಿಕೆ ಬಂದಿದ್ದು ಜನವರಿ ೧೧,೧೯೬೫ ರಲ್ಲಿ..ಅದರ ಒಳಪುಟ....

ಸುಧಾ ವಾರ ಪತ್ರಿಕೆಯ ಮೊದಲ ಸಂಚಿಕೆ


ಎಲ್ಲೆಲ್ಲೂ ಪುಸ್ತಕದ ರಾಶಿ
ಸರಳ ಸಜ್ಜನಿಕೆಯ ಅಂಕೇಗೌಡರು

ಸರಸ್ವತಿ ಸಾಗರದ ಮಧ್ಯೆ ನಮ್ಮ ಬ್ಲಾಗಿಗರ ತಂಡ

ಇಷ್ಟೊಂದು ಪುಸ್ತಕ ಸಂಗ್ರಹ ಮಾಡಿರುವ ಶ್ರೀಯುತರ ಬಗ್ಗೆ ಒಬ್ಬರು "ಈ ಪರಿಯ ಪುಸ್ತಕ ಪ್ರೇಮ" ಎಂಬ ಪುಸ್ತಕವನ್ನು ಬರೆದಿದ್ದಾರೆ.
ಇದುವರೆಗೆ ಯಾವುದೇ ಸಹಾಯ ಅಸ್ಥ ನೀಡದ ರಾಜ್ಯ ಸರಕಾರ ೨-೧೨-೧೩ ನೆ ಸಾಲಿನ ಬಜೆಟ್ನಲ್ಲಿ ಈ ಒಂದು ಗ್ರಂಥಾಲಯಕ್ಕೆ ೫೦ ಲಕ್ಷ ರುಪಾಯಿಗಳನ್ನು ಮೀಸಲಿಟ್ಟಿದೆ..

ಜೀವಮಾನದಲ್ಲಿ ಇಂಥ ಒಂದು ಸ್ಥಳವನ್ನು ನೋಡಲೇಬೇಕು,ಅಂಕೇಗೌಡರ ಇಂಥ ಒಂದು ಸಾಧನೆಯನ್ನು,ಅವರ ದೀರ್ಘ ತಪಸ್ಸಿನ ಪ್ರತಿಫಲವನ್ನು ಕಣ್ತುಂಬ ನೋಡಲೇಬೇಕು.ದಯವಿಟ್ಟು ಒಮ್ಮೆ ಹೋಗಿ ಬನ್ನಿ,ಅವರ ವಿಳಾಸ ಈ ಕೆಳಗಿನಂತಿದೆ.ಸಾಧ್ಯವಾದರೆ ಆ ಪುಸ್ತಕ ಸಾಗರಕ್ಕೆ ನೀವೂ ಒಂದು ಪುಸ್ತಕವನ್ನು ಕಾಣಿಕೆ ನೀಡಿ.ಇಂತಃ ಒಂದು ಸಮಾಜ ಕಾರ್ಯಕ್ಕೆ ನಮ್ಮಿಂದ ಕೂಡ ಒಂದು ಅಳಿಲು ಸೇವೆ ಆಗಲಿ. 
ಈ ಪುಸ್ತಕದ ಮನೆಯು ಮಂಡ್ಯ ಜಿಲ್ಲೆ,ಪಾಂಡವಪುರ ರೈಲ್ವೆ ನಿಲ್ದಾಣದಿಂದ ಸುಮಾರು ೨ ಕಿಮಿ ದೂರದಲ್ಲಿ,ಮೈಸೂರು-ನಾಗಮಂಗಲ ರಸ್ತೆಯಲ್ಲಿ ಇದೆ..

ಅಂಕೇಗೌಡ ಜ್ಞಾನ ಪ್ರತಿಷ್ಠಾನ,
ಪುಸ್ತಕ ಮನೆ,ಹರಳಹಳ್ಳಿ,
ಪಾಂಡವಪುರ ತಾಲ್ಲೂಕು,ಮಂಡ್ಯ ಜಿಲ್ಲೆ,
ದೂರವಾಣಿ:9242822934.

ಫೋಟೋಗಳು:ಗಿರೀಶ್ ಮತ್ತು ನವೀನ್