Wednesday, July 20, 2011

ದೇಹದಾನ !!!

"ಏನ್ ತಾತ,ನಮ್ಮಪ್ಪ ಬಂದು ಕೇಳಿದ್ರೆ ಕೊಡಲ್ಲ ಅಂದಂತೆ "....ಮುಸ್ಸಂಜೆಯಲ್ಲಿ ಹೊಲದಿಂದ ಬಂದು,ಪುಷ್ಪಾಳಿಗೆ   ಟೀ ತರಲು ಏಳಿ ಜಗುಲಿಯ ಮೇಲೆ ಬೀಡಿ ಸೇದುತ್ತ ಕುಳಿತಿದ್ದಾಗ,ಏಕಾ  ಏಕಿ ಯಮುನಾ ಬಂದು ಹೀಗೆ ಕೂಗಾಡಿದಳು...
ಯಮುನಾ ನನ್ನ ಮೊದಲನೇ ಮಗ ಶೇಖರನ  ಮಗಳು....ಪುಷ್ಪ ನನ್ನ ಎರಡನೇ ಮಗ ಮೂರ್ತಿಯ ಹೆಂಡತಿ..
ಇಬ್ಬರೂ ಮಕ್ಕಳಿಗೂ ಬೇರೆ ಬೇರೆ ಮನೆ ಕಟ್ಟಿಸಿ ಕೊಟ್ಟಿದ್ದೇನೆ,
ಹಿರಿಯ ಮಗ ಶೇಖರನಿಗೆ ಹೊಸ ಮನೆಯನ್ನು ಕೊಟ್ಟಿದ್ದೇನೆ,ನನ್ನ ಪಿತ್ರಾರ್ಜಿತ ಹಳೆ ಮನೆಯನ್ನು ಕಿರಿಯ ಮಗನಿಗೆ ಕೊಟ್ಟು,ನಾನು ಅವನ ಮನೆಯಲ್ಲೇ ಇದ್ದೇನೆ,
ಆಗಾಗ  ಎರಡೂ  ಮನೆಗೆ ಹೋಗಿ ಬರುತ್ತಿರುತ್ತೇನೆ...
ಯಮುನಾ ಹೀಗೆ ಗದರುವುದನ್ನು ಕೇಳಿಸಿಕೊಂಡ ಪುಷ್ಪ ಹೊಳಗಿನಿಂದ ಬಂದು "ಏ ಇದೆಲ್ಲ ದೊಡ್ಡವರ ವಿಷಯ,ನಿಮ್ಮಪ್ಪ ಬಂದು ಮಾತಾಡುತ್ತಾರೆ,ನೀನ್ ಇದರಲೆಲ್ಲ ತಲೆ ಹಾಕಬೇಡ,ಸುಮ್ನೆ ಹೋಗಿ ಓದ್ಕೋ ಹೋಗು,
ಯಜಮಾನಗಿತ್ತಿ ತರಹ ಬಂದು ಬಿಟ್ಟಳು " ಅಂತ ಅಂದಳು..
"ಏನ್ ಚಿಕ್ಕಮ್ಮ ,ನಾನೇನ್ ಚಿಕ್ಕವಳಲ್ಲ,ನಾನು ಇವಾಗ ಮೇಜರ್ ,ನನಗೂ ಕೇಳೋ ಹಕ್ಕಿದೆ,ನಿಮಗೆಷ್ಟು  ಹಕ್ಕಿದ್ಯೋ ಅಷ್ಟೇ ನನಗೂ ಇದೆ  "ಎಂದಾಗ ಒಂದು ಕ್ಷಣ ನನ್ನ ಎದೆ ಬಡಿತ ನಿಂತು ಬಿಟ್ಟಿತ್ತು...
ಇವಳೇನಾ ಹದಿನೆಂಟು ವರ್ಷದಿಂದ ಮುದ್ದಾಗಿ ಸಾಕಿದ ಮೊಮ್ಮಗಳು,ನನ್ನ ತೊಡೆ ಮೇಲೆ ಮಲಗಿಕೊಂಡು ಕಥೆ ಕೇಳುತ್ತಿದ್ದವಳು ಇವಳೇನಾ,
ಎಷ್ಟು ಪ್ರೀತಿಯಿಂದ ಸಾಕಿದ್ದೆ,ಪ್ರತಿ ವರ್ಷ ಊರ ಅಮ್ಮನ ಜಾತ್ರೆಗೆ ಹೊಸ ಬಟ್ಟೆ ಕೊಡಿಸುತ್ತಿದ್ದೆ....
ಇದಕಿಂತ ಎರಡು  ದಿನ ಮುಂಚೆ ಅವಳ ಅಪ್ಪ ಬಂದು  ಇದೆ ರೀತಿ ಗಲಾಟೆ ಮಾಡಿದ್ದ..ಹುಟ್ಟಿಸಿದ ತಪ್ಪಿಗೆ ನನ್ನ ಎದೆ ಮೇಲೆ ಒದ್ದಿದ್ದಾನೆ...
ಇಬ್ಬರೂ ಮಕ್ಕಳಿಗೆ ನಾನೇನು ಕಡಿಮೆ ಮಾಡಿಲ್ಲ..
ಇಬ್ಬರ ಹೆಸರಿಗೂ ಇರುವ ಜಮೀನನ್ನು ಸರಿಯಾಗಿ ಪಾಲು ಮಾಡಿ ಪಾಲುಪಾರಿಕತ್ತು ಬರೆದಾಗಿದೆ...ಹಿರಿ ಮಗನ ಗಲಾಟೆ ತಾಳಲಾರದೆ ಈ  ಕೆಲಸವನ್ನು ಬಹಳ ಹಿಂದೆಯೇ ಮಾಡಿ ಬಿಟ್ಟಿದ್ದೇನೆ...ಆದರೆ ಅವರ ಹೆಸರಿಗೆ ಇನ್ನು ನೊಂದಾಯಿಸಿಲ್ಲ ಅಷ್ಟೇ...ಹೇಗೆ ಆದರೂ ಅವರಿಗೆ ಆ ಜಮೀನು ..ಆದರೂ ಹಿರಿ ಮಗ ಮಾತ್ರ ಆದಷ್ಟು ಬೇಗ ತನ್ನ ಹೆಸರಿಗೆ ಮಾಡಿಸಿಕೊಳ್ಳಲು ನೋಡುತ್ತಿದ್ದಾನೆ...
ಕೆಲವು ದಿನಗಳ ಹಿಂದೆ ನಂಜೇಗೌಡ ಬಂದು ಅವರವರ  ಜಮೀನನ್ನು ಅವರ ಹೆಸರಿಗೆ ಮಾಡಿಕೊಡು,ಸುಮ್ನೆ ಯಾಕೆ ಇನ್ನು ನಿನ್ನ ಹೆಸರಲ್ಲಿ ಇಟ್ಕೊ೦ಡಿದಿಯ ಅಂತ ಕೇಳಿದ್ದ,ನಿನಗ್ಯಾಕೆ ನಮ್ಮ ಮನೆ ವಿಚಾರ ಅಂತ ಬೈದು ಕಳ್ಸಿದ್ದೆ..ನಂಜೇಗೌಡ ಅಂದ್ರೆ ಕೆರೆ ಪಕ್ಕದ ನಮ್ಮ ಗದ್ದೆಯ ಪಕ್ಕದಲ್ಲೇ ಅವನ ಗದ್ದೆ ಇದೆ..ಅಲ್ಲಿ ನನ್ನ ಇಬ್ಬರೂ ಮಕ್ಕಳಿಗೂ ಪಾಲಿದೆ,ಅದರಲ್ಲಿ ಶೇಖರ ತನ್ನ ಪಾಲನ್ನು ನಂಜೇಗೌಡನಿಗೆ  ಮಾರುವುದಾಗಿ ಹೇಳಿ ಅವನ ಹತ್ತಿರ ಸ್ವಲ್ಪ ಹಣ ಕೂಡ ತಗೊಂಡಿದ್ದಾನೆ...ಅದಕ್ಕಾಗಿ ಈ ರೀತಿ ಅಪ್ಪ ಮಗಳು ಇಬ್ಬರೂ ಜಗಳ ಮಾಡುತ್ತಿದ್ದಾರೆ..

ಇಬ್ಬರು  ಮಕ್ಕಳಲ್ಲಿ ಈ ಶೇಖರ ತುಂಬ ಸೋಮಾರಿ...ಇಬಾರಿಗೂ ತಮ್ಮ ತಮ್ಮ ಜಮೀನನ್ನು ಪಾಲು ಮಾಡಿ ಕೊಟ್ಟು ೨ ವರ್ಷ ಆಯಿತು...ಈ ಮೂರ್ತಿನಾದರು,ಏನಾದ್ರು ಬೆಳೆ ಬೆಳೆದು ಜೀವನ ಮಾಡ್ತಿದ್ದಾನೆ...ಅದರ ಜೊತೆಗೆ ಎರಡು ಹಸು ಸಾಕಿದ್ದಾನೆ...ಗಂಡ ಹೆಂಡತಿ ಇಬ್ಬರೂ ವಿದ್ಯಾವಂತರು... 
ಮನೆ ಹಿರಿ ಮಗ ಆಗಿ ಅವನು ಇರುವ ಜಮೀನನ್ನು ಮಾರಲು ತಯ್ಯಾರಿದ್ದಾನೆ..
ಬೇಲಿಯೇ ಎದ್ದು ಹೊಲ ಮೆಯ್ದ ಹಾಗೆ   ಆಯಿತು..

೩೦ ವರ್ಷದ ಹಿಂದೆ ಸಿಕ್ಕ ಮೇಷ್ಟು ಕೆಲಸ ಬಿಟ್ಟೆ,ಬರಿ ೪೦ ರುಪಯೀ ಸಂಬಳ...ಆಗಿನ ಕಾಲದಲ್ಲಿ ಅದೇ ಹೆಚ್ಚು...ಆದರೂ ನಾನು ನನ್ನ ಅಣ್ಣ ಇಬ್ಬರೂ ಕೆಲಸಕ್ಕೆ ಸೇರಲಿಲ್ಲ...ನಮ್ಮ ಜಮೀನಿನಲ್ಲೆ ಬೇಕಾದಷ್ಟು ಆದಾಯ ಬರುತಿತ್ತು...
ಪಿತ್ರಾರ್ಜಿತ ಆಸ್ತಿಯ ಜೊತೆಗೆ ಒಂದಷ್ಟು ಬೇರೆಯವರಿಂದ ಕೊಂಡು..ಹೊಸ ಮನೆ ಕಟ್ಟಿಸಿ,ಅದನ್ನು ಹಿರಿಯ ಮಗನಿಗೆ ಕೊಟ್ಟಿದ್ದೇನೆ....ಮೂರ್ತಿ ಮತ್ತು ಅವನ ಹೆಂಡತಿ ಇಬ್ಬರಿಗೂ ಸ್ವಲ್ಪ  ಜವಾಬ್ದಾರಿ ಅನ್ನೋದು ಇದೆ...ಆದರೆ ಶೇಖರ ಆಗಲಿ ಅವನ ಹೆಂಡತಿಗಾಗಲಿ ಇಬ್ಬರೂ ಸೋಮಾರಿಗಳೇ...ಭಂಡರು..ದುಡಿದು ತಿನ್ನ ಬೇಕೆಂಬ ಯೋಚನೆಯೇ ಇಲ್ಲ...ಇರುವ ಆಸ್ತಿಯನ್ನು ಮಾರಿ ತಮ್ಮ ಮಗಳ ಮದುವೆ ಮಾಡುವ ನಿರ್ಧಾರ ಮಾಡಿರಬಹುದು..
ಬೇಕಾದಷ್ಟು ಸಾಲ ಮಾಡಿದ್ದಾನೆ,ಅದನ್ನೆಲ್ಲೇ ತೀರಿಸಲು ಈಗ ಜಮೀನನ್ನು  ತನ್ನ ಹೆಸರಿದೆ ಮಾಡಿ ಕೊಡಿ ಎಂದು ಪೀಡಿಸುತ್ತಿದ್ದಾನೆ..

ಅಪ್ಪನ ಆಸ್ತಿಯಲ್ಲಿ ಬೆವರು ಸುರಿದಿ ದುಡಿದು ಅದಕ್ಕೆ ಇನ್ನೊಂದಿಷ್ಟು ಹೊಲ ಗದ್ದೆಗಳನ್ನು ತೆಗೆದು ಕೊಂಡಿದ್ದೇನೆ... ಈಗ ಅವನ ಹೆಸರಿಗೆ ಮಾಡಿ ಕೊಟ್ಟರೆ ಅದನ್ನೆಲ್ಲಾ ನನ್ನ ಕಣ್ಣ ಮುಂದೆಯೇ ಮಾರುತ್ತಾನೆ,,ಅದಕ್ಕೆ ಅವನ ಹೆಸರಿಗೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದೇನೆ...
ಇದೆಲ್ಲಕಿಂತ ಮಿಗಿಲಾಗಿ  ನನ್ನ ಮುದ್ದು ಮೊಮ್ಮಗಳು ಬಂದು ಈ ರೀತಿ ಕೇಳಿದಳಲ್ಲ?ಅದೇ ಬೇಜಾರು..
"ಸರಿ ಹೋಗಮ್ಮ ,ನಿಮ್ಮ ಅಪ್ಪನ ಬರಕ್ಕೆ ಹೇಳು...ಮುಂದಿನ ವಾರ ತಾಲೂಕ್ ಆಫೀಸಿನಲ್ಲಿ ಎಲ್ಲಾ ದಾಖಲೆಗಳನ್ನ ಕೊಡ್ತೀನಿ ಅಂತ ಹೇಳು ನಿನ್ನ ಅಪ್ಪಂಗೆ "ಅಂದ ಕೂಡಲೇ ಹಿಂದಕ್ಕೆ ತಿರುಗಿ  ನೋಡದ  ಹಾಗೆ ಹೋದಳು..
ನನಗೂ ಅವಳ ಮುಖ ನೋಡಲಿ ಇಷ್ಟ ಇಲ್ಲದೆ ಕತ್ತು ಬಗ್ಗಿಸಿ ಕೊಂಡಿಯೇ ಇದ್ದೆ.....
ಮೊಮ್ಮಗಳ ಆಸೆ ಕೂಡ ಅದೇ ಆಗಿರಬೇಕು...ನನ್ನ ಮಗಳು ಯಾವತ್ತು ಕೂಡ ಈ ರೀತಿ ತಿರುಗಿ ಮಾತಾಡಿರಲಿಲ್ಲ..ಆದರೆ...
ಶೇಖರ ತನ್ನ ಜಮೀನನ್ನು ನಂಜೇಗೌಡರಿಗೆ  ಮಾರುವುದಂತು ಖಚಿತ..ಅವರ ಅಸ್ತಿ ಏನು ಬೇಕಾದರೂ ಮಾಡಿಕೊಳ್ಳಲಿ...

ನನ್ನ ಹೆಂಡತಿ ತೀರಿಕೊಂಡಾಗ,ಶೇಖರ ತನ್ನ ಪಾಲಿನ ಹೊಲದಲ್ಲಿ ಅಂತ್ಯಕ್ರಿಯೆ ಮಾಡಲು ಚಕಾರ ಎತ್ತಿದ್ದ....ತಾಯಿ ಅಂತ್ಯಕ್ರಿಯೇಯಲ್ಲೂ ಸಣ್ಣ ಪುಟ್ಟದಕ್ಕೆ ಲೆಕ್ಕ ಬರೆದು ಮೂರ್ತಿ ಹತ್ತಿರ ಖರ್ಚಿನ  ಅರ್ಧ ಭಾಗ ತೆಗೆದು ಕೊಂಡಿದ್ದ...
ನನಗೂ ವಯಸ್ಸಾಯಿತು...ನನ್ನ ಆಯಸ್ಸು ಕೂಡ ಮುಗಿಯುತ್ತ ಬಂತು...ಅವರ ಹೆಸರಿಗೆ ಹೊಲ ತೋಟ ಎಲ್ಲಾ ಮುಂದಿನ ವಾರ ಮಾಡಿಕೊಡುತ್ತೇನೆ..
ಈಗಾಗಲೇ ನನ್ನ ಮರ್ಯಾದೆಯನ್ನು ಮಗ ,ಮೊಮ್ಮಗಳು ಸೇರಿ ಊರವರ  ಮುಂದೆ  ಕಳೆದು ಹಾಗಿದೆ...
ಅದಕ್ಕೆ ಇವರ ಚಿಂತೆಯೇ ಬೇಡ...
ಆಗ ಸಿಕ್ಕಿದ್ದ ಮೇಷ್ಟು ಕೆಲಸಕ್ಕೆ ಹೋಗಿದ್ದರೆ ಈಗ ಈ ರೀತಿ ಹರಿದ ಚಪ್ಪಲಿ ಹಾಕಿಕೊಂಡು ಓಡಾಡುವ  ಸ್ಥಿತಿ ಇರುತ್ತಿರಲಿಲ್ಲ...ಈ ನನ್ನ ಹಿರಿ ಮಗನಿಗೆ ಕಡೆ ಪಕ್ಷ ಒಂದು ಜೊತೆ ಚಪ್ಪಲಿ ಕೊಡಿಸಬೇಕೆಂಬ ಆಸೆ ಇಲ್ಲ,ಆದರೆ ಜಮೀನು ಮಾತ್ರ ಬೇಕು...ಆ ಕೆಲ್ಸಕ್ಕೆ ಹೋಗಿದ್ದರೆ ಪಿಂಚಣಿಯಾದರು ಬರುತ್ತಿತ್ತು...
ಅವರಾದರೂ ನೆಟ್ಟಗೆ ಓದಿದ್ದರೆ ಈ ರೀತಿಯ ದುರ್ಬುದ್ಧಿ ಅವನಿಗೆ ಬರುತ್ತಿರಲಿಲ್ಲ... ಆದರೂ ಓದುತ್ತಿರುವ ಮೊಮ್ಮಗಳಿಗೆ ಏಕೆ ಬಂತು?....
ಇನ್ನೇನು ಮಾಡಲು ಸಾಧ್ಯವಿಲ್ಲ...ನಾನು ಸತ್ತಾಗ ಕೂಡ ನನ್ನ ಮಕ್ಕಳು ಕಿತ್ತಾಡುವುದು  ಬೇಡ..ಮರ್ಯಾದೆ ಹಾಳು ಮಾಡಿಕೊಳ್ಳುವುದು ಬೇಡ...ಮತ್ತೆ ಅದೇ ತರಹ ಜಗಳ ಮಾಡಿಕೊಂಡು ಕೂರುವುದು ಬೇಡ...
......ಅದಕ್ಕೆ ಯಾವುದಾದರು ಕಾಲೇಜಿಗೆ ದೇಹದಾನ ಮಾಡಲು ನಿರ್ಧಾರ ಮಾಡಿದ್ದೇನೆ ,ಯಾವುದಾದರು ಆಸ್ಪತ್ರೆಗೆ ಪತ್ರ ಬರೆಯಬೇಕು ಎಂದು ಕೊಂಡಿದ್ದೇನೆ..
ಯಾವ ಮಕ್ಕಳಾದರು ನನ್ನ ದೇಹದಿಂದ ಎನಾದ್ರೂ  ಕಲಿತುಕೊಳ್ಳಲಿ....ಅವರಿಗಾದರೂ ಒಳ್ಳೆಯದಾಗಲಿ...
ಮನೆಯ ಹಿರಿ ಮಗನಿಗೆ ಜವಾಬ್ದಾರಿ ಇಲ್ಲ ಅಂದರೆ ಅಥವಾ ಅವನಿಗೆ ದುಡಿದು ತಿನ್ನ ಬೇಕು ಎಂಬ ಹಂಬಲ ಇಲ್ಲ ಅಂದರೆ,ಹೆತ್ತವರ ಮೇಲೆ ಗೌರವ ಇಲ್ಲ ಅಂದರೆ ಇದೆ ಕಥೆ..
ಏನೋ ಇನ್ನು ಮುಂದೆ ನನಗೆ ನನ್ನ ಬೀಡಿಯೇ ಸಂಗಾತಿ...ಜೀವನದ ಕೊನೆಗಾಲವನ್ನು ಈ ರೀತಿ ಕಳೆಯುತ್ತೇನೆ ಎಂದು ಯಾವತ್ತಿಗೂ ಭಾವಿಸಿರಲಿಲ್ಲ...
 ಕೊನೆ ದಿನಗಳ ಎಣಿಕೆಯಲ್ಲಿ ಸಾಗುತ್ತಿದ್ದೇನೆ..
ಅವನು ತನ್ನ ಜಮ್ಮೀನನ್ನು ನನ್ನ ಕಣ್ಣ ಮುಂದೆ ಬೇರೆಯವರಿಗೆ ಮಾರುವ ಮೊದಲು ನನ್ನ ಕಣ್ಣು ಶಾಶ್ವತವಾಗಿ ಮುಚ್ಚಿದರೆ  ಒಳ್ಳೆಯದು...
 

Saturday, July 9, 2011

ಕಣ್ಣಾ ಮುಚ್ಚೆ .........!!!

ಕಣ್ಣಾ  ಮುಚ್ಚೇ.....
ಕಾಡೇ ಗೂಡು.....
ಉದ್ದಿನ ಮೂಟೆ......
ಉರುಳೆ ಹೋಯಿತು.....
ನನ್ನಯ ಹಕ್ಕಿ ಬಿಟ್ಟೇ ಬಿಟ್ಟೇ.....
ನಿನ್ನಯ ಹಕ್ಕಿ ಅಡಗಿಸಿಕೊಳ್ಳಿ........ 
ಬಾಲ್ಯದಲ್ಲಿ ಪ್ರತಿಯೊಬ್ಬರೂ ಈ ಹಾಡನ್ನು ಏನಿಲ್ಲ ಅಂದರೂ ಸಾವಿರ ಸರಿ ಆದರೂ ಹಾಡಿರುತ್ತೀವಿ....ಹುಡುಗಾಟದ ವಯಸ್ಸಿನಲ್ಲಿ ಇದನ್ನು ಬಹಳ ಖುಷಿ ಇಂದ ಮನೆಯ ಸುತ್ತ ಮುತ್ತಲ  ಮಕ್ಕಳೆಲ್ಲಾ ಸೇರಿ ಅದೆಷ್ಟು ಸಂಭ್ರಮದಿಂದ ಹಾಡಿರುತ್ತಿದ್ದೆವು.... ಆದರೆ ಇದು ನಮ್ಮ ಜೀವನದ ಅಂತ್ಯಕ್ಕೆ ಎಷ್ಟು ಹೋಲಿಕೆ ಆಗುತ್ತದೆ.....
ಈ ಪದಗಳನ್ನು ನಮ್ಮ ಜೀವನಕ್ಕೆ ಈ ರೀತಿ  ಹೋಲಿಸಬಹುದು...

ಕಣ್ಣಾಮುಚ್ಚೆ ಎಂದರೆ ಮನುಷ್ಯನ ಸಾವು,ಮನುಷ್ಯನ ಅಂತ್ಯ ..

ಕಾಡೇ ಗೂಡು ಅಂದರೆ ಸತ್ತ ನಂತರ ಕಾಡಿನಲ್ಲಿ ನಮ್ಮ ಸಮಾಧಿಯೇ ನಮ್ಮ ವಾಸ ಸ್ಥಾನ ಅಥವಾ ಗೂಡು...ಇಲ್ಲಿರುವುದು ಸುಮ್ಮನೆ,ಅಲ್ಲಿರುವುದು ನಮ್ಮನೆ ಎಂಬ ಹಾಗೆ ನಾವು ಸಧ್ಯ ಇರುವ ಮನೆ ಅದು ಕೇವಲ ಕ್ಷಣಿಕ,ಶಾಶ್ವತ ಅಲ್ಲ...ನಮ್ಮ ಸಮಾಧಿಯೇ ನಮಗೆ ಶಾಶ್ವತ...

ಉದ್ದಿನ ಮೂಟೆ ಅಂದರೆ ನಮ್ಮ ೬೦ ಕಿಲೋ,೮೦ ಕಿಲೋ, ಅಥವಾ ಕ್ವಿಂಟಾಲ್ ತೂಕದ ದೇಹ......

ಉರುಳೆ ಹೋಯಿತು ಅಂದರೆ ಸತ್ತಾಗ ದೇಹ ಕೆಳಗೆ ಬೀಳುವ ಸಂಕೇತ....ಇಲ್ಲಿ ಉದ್ದಿನ ಮೂಟೆ ಉರುಳಿ ಹೋಯಿತು ಎಂಬುದನ್ನು ಸೂಚಿಸುತ್ತದೆ....

ನನ್ನಯ ಹಕ್ಕಿ ಬಿಟ್ಟೇ ಬಿಟ್ಟೆ ಅಂದರೆ ನಮ್ಮ ಪ್ರಾಣ ಪಕ್ಷಿ ಅಥವಾ ಆತ್ಮವನ್ನು ಬಿಡುತ್ತಿದ್ದೇವೆ ಎಂದು ಪರಮಾತ್ಮನಲ್ಲಿ ಹೇಳುವುದು....ಸತ್ತಾಗ ಪ್ರಾಣ ಪಕ್ಷಿ ಹಾರಿ ಹೋಯಿತು ಎಂದು ಹೇಳುವ ಹಾಗೆ ಇದು ಕೂಡ...

ನಿನ್ನಯ ಹಕ್ಕಿ ಅಡಗಿಸಿಕೊಳ್ಳಿ ಅಂದರೆ ನಮ್ಮ ಆತ್ಮವನ್ನು ನಿಮ್ಮ ಆತ್ಮದಲ್ಲಿ ಅಡಗಿಸಿಕೊಳ್ಳಿ ಎಂದು ಪರಮಾತ್ಮನಲ್ಲಿ ವಿನಂತಿಸಿಕೊಳ್ಳುವುದು...

(ಹಾಗೆ ಇದು ಒಂದು ವ್ಯಾಖ್ಯಾನ ಅಷ್ಟೇ !!! ಇದರಲ್ಲಿ ತಪ್ಪು-ಒಪ್ಪುಗಳು ಇದ್ದರೂ ಇರಬಹುದು)